ವಿಜ್ಞಾನದ ವಿಶ್ವಕ್ಕೆ ಕನ್ನಡದ ಕಿಟಕಿ
ವಿಜ್ಞಾನ ದಿನ ಎಂದಕೂಡಲೇ ನಮಗೆ ಫೆಬ್ರುವರಿ ೨೮ ನೆನಪಾಗುತ್ತದೆ. ರಾಮನ್ ಪರಿಣಾಮದ ಆವಿಷ್ಕಾರದ ನೆನಪಿನಲ್ಲಿ ನಾವು ಆ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸುತ್ತೇವೆ. ಇಂದು, ನವೆಂಬರ್ ೧೦, ವಿಶ್ವ ವಿಜ್ಞಾನ ದಿನ (World Science Day for Peace and Development). ಯುನೆಸ್ಕೋ ನೇತೃತ್ವದಲ್ಲಿ ವಿಶ್ವದೆಲ್ಲೆಡೆ ನಡೆಯುವ ಈ ಆಚರಣೆ, ನಮ್ಮ ಸಮಾಜದಲ್ಲಿ ವಿಜ್ಞಾನದ ಮಹತ್ವವನ್ನು ಎತ್ತಿ ತೋರಿಸುತ್ತದೆ.
"ಜನಸಾಮಾನ್ಯರನ್ನು ತಲುಪದ ವಿಜ್ಞಾನದಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ" ಎನ್ನುವುದೊಂದು ಮಾತಿದೆ. ವಿಜ್ಞಾನದ ಬೆಳವಣಿಗೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ನಿಟ್ಟಿನಲ್ಲಿ ನಮ್ಮಲ್ಲೂ ಬಹಳಷ್ಟು ಕೆಲಸಗಳಾಗಿವೆ. ಕನ್ನಡ ಹಬ್ಬದೊಡನೆ ಪ್ರಾರಂಭವಾಗುವ ನವೆಂಬರ್ ತಿಂಗಳಿನಲ್ಲೇ ಬರುವ ಈ ವಿಜ್ಞಾನ ದಿನದಂದು ಆ ಪೈಕಿ ಕೆಲವನ್ನಾದರೂ ಪರಿಚಯಿಸುವ ಪ್ರಯತ್ನ ಇದು.
೧೯೧೮ರಲ್ಲಿ ಪ್ರಾರಂಭವಾದ 'ವಿಜ್ಞಾನ' ಮಾಸಪತ್ರಿಕೆ, ಕನ್ನಡದಲ್ಲಿ ಜನಪ್ರಿಯ ವಿಜ್ಞಾನದ ಮೊದಲ ಮೈಲಿಗಲ್ಲುಗಳಲ್ಲೊಂದು. ನಡೆದದ್ದು ಎರಡು ವರ್ಷವಷ್ಟೇ ಆದರೂ ವಿಜ್ಞಾನ ಸಂವಹನಕ್ಕೆ ದಾರಿತೋರಿಸಿದ್ದು ಈ ಪ್ರಯತ್ನ. ೧೯೭೮ರಲ್ಲಿ ಪ್ರಾರಂಭವಾಗಿ ನಲವತ್ತು ವರ್ಷಗಳಿಗೂ ಹೆಚ್ಚು ಕಾಲ ಸತತವಾಗಿ ಪ್ರಕಟವಾಗಿದ್ದು 'ಬಾಲವಿಜ್ಞಾನ'ದ ಸಾಧನೆ. ಡಾ. ಪಿ. ಎಸ್. ಶಂಕರ್ ಸಂಪಾದಕತ್ವದ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಪ್ರಕಟಣೆ 'ವಿಜ್ಞಾನ ಲೋಕ' ಇದೀಗ ಎರಡು ದಶಕಗಳ ಹೊಸ್ತಿಲಿನಲ್ಲಿದೆ.
ಮುಖ್ಯವಾಹಿನಿ ಪತ್ರಿಕೆಗಳಿಂದಲೂ ವಿಜ್ಞಾನಕ್ಕೆ ಸಾಕಷ್ಟು ಬೆಂಬಲ ದೊರೆತಿದೆ. 'ವಿಜ್ಞಾನ ವಿಜಯ'ವೆಂಬ ಪ್ರತ್ಯೇಕ ಪುಟವನ್ನೇ ಮೀಸಲಾಗಿಟ್ಟಿದ್ದ ವಿಜಯ ಕರ್ನಾಟಕದ ಪ್ರಯತ್ನ ಇಲ್ಲಿ ಉಲ್ಲೇಖಾರ್ಹ. ಇನ್ನು ಅಂಕಣ ಬರಹಗಳೂ ಜನಪ್ರಿಯ ವಿಜ್ಞಾನ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿವೆ. ಎಂಬತ್ತರ ದಶಕದಿಂದ ಪ್ರಕಟವಾಗುತ್ತಿರುವ ನಾಗೇಶ ಹೆಗಡೆಯವರ 'ವಿಜ್ಞಾನ ವಿಶೇಷ' ಈ ಪೈಕಿ ಅಗ್ರಗಣ್ಯವಾದದ್ದು. ವಿಜಯ ಕರ್ನಾಟಕದಲ್ಲಿ ಪ್ರಕಟವಾಗುತ್ತಿದ್ದ ಹಾಲ್ದೊಡ್ಡೇರಿ ಸುಧೀಂದ್ರರ 'ನೆಟ್ ನೋಟ' ಕೂಡ ಅಪಾರ ಜನಪ್ರಿಯತೆ ಗಳಿಸಿತ್ತು. ಕೊಳ್ಳೇಗಾಲ ಶರ್ಮರ ಅಂಕಣ ಬರಹಗಳೂ ಇದೇ ಸಾಲಿಗೆ ಸೇರುತ್ತವೆ.
ಆಯಾ ಕಾಲಘಟ್ಟದ ಬದಲಾವಣೆಗಳ ಬಗ್ಗೆ ಆಗಲೇ ಮಾಹಿತಿ ನೀಡಿದ್ದು ಅಂಕಣ ಬರಹಗಳಷ್ಟೇ ಅಲ್ಲ. ಜಪಾನಿನ ಮೇಲೆ ಪರಮಾಣು ಬಾಂಬ್ ದಾಳಿ ನಡೆದ ಸಂದರ್ಭದಲ್ಲಿ ಜಗತ್ತಿನೆಲ್ಲೆಡೆ ಪರಮಾಣು ಶಕ್ತಿಯ ಬಗ್ಗೆ ಕುತೂಹಲ ಮೂಡಿತ್ತು. ಜೆ. ಆರ್. ಲಕ್ಷ್ಮಣರಾಯರು ಆ ಸಂದರ್ಭದಲ್ಲಿ 'ಪರಮಾಣು ಚರಿತ್ರೆ' ಎಂಬ ಕೃತಿ ರಚಿಸಿದ್ದರು. ಮನುಷ್ಯ ಮೊದಲ ಬಾರಿಗೆ ಬಾಹ್ಯಾಕಾಶಯಾನ ಕೈಗೊಂಡ ಸಮಯದಲ್ಲಿ ಅಡ್ಯನಡ್ಕ ಕೃಷ್ಣಭಟ್ಟರ 'ಗಗನ ಯುಗ' ಪ್ರಕಟವಾಯಿತು. ೧೯೬೦ರ ದಶಕದಲ್ಲಿ, ಕಂಪ್ಯೂಟರ್ ವಿಜ್ಞಾನ ಆಗಷ್ಟೇ ಬೆಳೆಯುತ್ತಿದ್ದ ಸಂದರ್ಭದಲ್ಲೇ ಶಿವರಾಮ ಕಾರಂತರು, ಜಿ. ಟಿ. ನಾರಾಯಣರಾಯರು ಕನ್ನಡದಲ್ಲಿ ಆ ಕುರಿತು ಬರೆದಿದ್ದರು!
ಬೆಳ್ಳಾವೆ ವೆಂಕಟನಾರಣಪ್ಪ, ಆರ್. ಎಲ್. ನರಸಿಂಹಯ್ಯ, ಬಿ. ವಿ. ಸುಬ್ಬರಾಯಪ್ಪ ಮೊದಲಾದ ಆದ್ಯ ಪ್ರವರ್ತಕರಿಂದ ಪ್ರಾರಂಭಿಸಿ ಇಂದಿನವರೆಗೆ ಜನಪ್ರಿಯ ವಿಜ್ಞಾನದ ಸಾವಿರಾರು ಕೃತಿಗಳು ಕನ್ನಡದಲ್ಲಿ ಪ್ರಕಟವಾಗಿವೆ. 'ವಿಜ್ಞಾನ' ಪತ್ರಿಕೆಯನ್ನು ಹೊರತಂದ ಕರ್ಣಾಟಕ ವಿಜ್ಞಾನ ಪ್ರಚಾರಿಣೀ ಸಮಿತಿ, ವಿಜ್ಞಾನದ ಹಲವು ಕಿರುಪುಸ್ತಕಗಳನ್ನೂ ಪ್ರಕಟಿಸಿತ್ತು. 'ನಾಲ್ಕಾಣೆ ಪುಸ್ತಕ'ಗಳೆಂದೇ ಹೆಸರಾದ ಮೈಸೂರು ವಿವಿಯ ಪ್ರಚಾರ ಪುಸ್ತಕಮಾಲೆಯ ವಿಜ್ಞಾನ ಪುಸ್ತಿಕೆಗಳು ಸಾವಿರಾರು ಸಂಖ್ಯೆಯಲ್ಲಿ ಮಾರಾಟವಾಗಿ ದಾಖಲೆ ನಿರ್ಮಿಸಿದ್ದವು. ಅನುಪಮಾ ನಿರಂಜನ, ರಾಶಿ, ಸಿ. ಆರ್. ಚಂದ್ರಶೇಖರ್ ಸೇರಿದಂತೆ ಹಲವು ತಜ್ಞ ವೈದ್ಯರ ಕೃತಿಗಳು ಅಪಾರ ಪ್ರಮಾಣದ ಓದುಗರನ್ನು ತಲುಪಿವೆ. ನಾಗೇಶ ಹೆಗಡೆ, ಟಿ. ಆರ್. ಅನಂತರಾಮು ಮುಂತಾದವರ ಪುಸ್ತಕಗಳು ನಿರಂತರವಾಗಿ ಪ್ರಕಟವಾಗುತ್ತಿವೆ.
ಕನ್ನಡದಲ್ಲಿ ಜನಪ್ರಿಯ ವಿಜ್ಞಾನದ ಪ್ರಸಾರಕ್ಕೆ ಆಕಾಶವಾಣಿಯ ಕೊಡುಗೆಯೂ ಮಹತ್ವದ್ದು. ಇನ್ನು ಡಿಜಿಟಲ್ ಜಗತ್ತಿನಲ್ಲಿ ಇಣುಕುವುದಾದರೆ 'ಜಾಣಸುದ್ದಿ' ಪಾಡ್ಕಾಸ್ಟ್, 'ಕುತೂಹಲಿ' ಜಾಲಪತ್ರಿಕೆ, 'ಅರಿಮೆ' ಹಾಗೂ 'ಇಜ್ಞಾನ'ದಂತಹ ಜಾಲತಾಣಗಳು ವಿಶೇಷ ಪ್ರಯತ್ನಗಳಾಗಿ ಗಮನಸೆಳೆಯುತ್ತವೆ. ಕನ್ನಡದಲ್ಲಿ ವಿಜ್ಞಾನ ವಿಷಯಗಳನ್ನು ಪರಿಚಯಿಸುವ ಪ್ರಯತ್ನಗಳು ಯೂಟ್ಯೂಬ್ನಂತಹ ಮಾಧ್ಯಮಗಳಲ್ಲೂ ನಡೆದಿವೆ.
ನವೆಂಬರ್ ೧೧, ೨೦೨೪ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ