ಜನಪ್ರಿಯ ವಿಜ್ಞಾನವೆಂಬ ವಿಸ್ಮಯಲೋಕ
"ನೀನು ಅದೇನೋ ಬರೀತೀಯಂತಲ್ಲ, ಏನು?" ಎನ್ನುವುದು ನನ್ನ ಕನ್ನಡ ಬಾರದ ಮಿತ್ರರ ಪೈಕಿ ಹಲವರ ಪ್ರಶ್ನೆ. ವಿಜ್ಞಾನ-ತಂತ್ರಜ್ಞಾನದ ವಿಷಯಗಳನ್ನು ಕನ್ನಡದಲ್ಲಿ ವಿವರಿಸುವ ಪ್ರಯತ್ನ ಮಾಡುತ್ತೇನೆ ಎಂದಷ್ಟೇ ಹೇಳಿದರೆ ಅವರಿಗೆ ಸಮಾಧಾನವಾಗುವುದಿಲ್ಲ. "ಇಂಗ್ಲಿಷಿನ ಲೇಖನಗಳನ್ನೂ ಪುಸ್ತಕಗಳನ್ನೂ ತೆಗೆದುಕೊಂಡು ಕನ್ನಡಕ್ಕೆ ಅನುವಾದ ಮಾಡ್ತೀಯ, ಅಷ್ಟೇ ತಾನೇ?" ಎಂದು ತಿರುಗಿ ನನ್ನನ್ನೇ ಕೇಳುತ್ತಾರೆ. "ಈಚೆಗೆ ಅನುವಾದ ತಂತ್ರಾಂಶಗಳು ಚೆನ್ನಾಗಿ ಕೆಲಸ ಮಾಡುತ್ತಿವೆಯಲ್ಲ, ಇನ್ನು ಮುಂದೆ ಅವನ್ನೇ ಬಳಸಬಹುದಲ್ಲ!" ಎಂದು ಕೇಳಿದವರೂ ಇದ್ದಾರೆ.
ಇದು ನನ್ನೊಬ್ಬನ ಪರಿಸ್ಥಿತಿಯಷ್ಟೇ ಆಗಿರಲಿಕ್ಕಿಲ್ಲ. ಇಂಗ್ಲಿಷೇತರ ಭಾಷೆಗಳಲ್ಲಿ ಜನಪ್ರಿಯ ವಿಜ್ಞಾನ ಸಂವಹನ ಕೈಗೊಳ್ಳುವ ಬಹುತೇಕರು ಇಂತಹ ಪ್ರಶ್ನೆಯನ್ನು ಎದುರಿಸಿರುತ್ತಾರೆ ಎನ್ನುವುದು ನನ್ನ ಅನಿಸಿಕೆ. ಕನ್ನಡದಲ್ಲಂತೂ ಅನೇಕ ಲೇಖಕರು ಇಂತಹ ಪ್ರಶ್ನೆಗಳನ್ನು ಎದುರಿಸಿರುವುದು ನನಗೆ ಖಚಿತವಾಗಿ ತಿಳಿದಿದೆ.
ಜನಸಾಮಾನ್ಯರಿಗೂ ಅರ್ಥವಾಗುವಂತೆ, ಅವರಲ್ಲೂ ಆಸಕ್ತಿಹುಟ್ಟಿಸುವಂತೆ ಪ್ರಸ್ತುತಪಡಿಸಲಾದ ವಿಜ್ಞಾನವೇ ಜನಪ್ರಿಯ ವಿಜ್ಞಾನ ಎಂದು ಕೇಂಬ್ರಿಜ್ ನಿಘಂಟು ಹೇಳುತ್ತದೆ. ಇಂಗ್ಲಿಷಿನಲ್ಲಿ ಇದನ್ನು ಪಾಪ್ಯುಲರ್ ಸೈನ್ಸ್ ಎಂದು ಕರೆಯುತ್ತಾರೆ. ಸಂಶೋಧನಾ ಪ್ರಬಂಧಗಳಂತೆ ನಿರ್ದಿಷ್ಟ ನಿಯಮಗಳನ್ನು ಪಾಲಿಸಬೇಕಾದ, ಸಮಗ್ರ ವಿಮರ್ಶೆಗೆ ಒಳಪಡಬೇಕಾದ ಕಟ್ಟುಪಾಡುಗಳು ಜನಪ್ರಿಯ ವಿಜ್ಞಾನಕ್ಕೆ ಇರುವುದಿಲ್ಲ.
ಇದು ಜನಪ್ರಿಯ ವಿಜ್ಞಾನದ ಶಕ್ತಿಯೂ ಹೌದು, ದೌರ್ಬಲ್ಯವೂ ಹೌದು. ವಿಜ್ಞಾನವನ್ನು ಎಲ್ಲರಿಗೂ ಅರ್ಥವಾಗುವಂತೆ ಹೇಳಬೇಕಾದರೆ ವಿಷಯವನ್ನು ಎಷ್ಟು ತೆಳುವಾಗಿಸಬಹುದು? ಆ ಕೆಲಸವನ್ನು ವಿಜ್ಞಾನಿಗಳಲ್ಲದವರೂ ಮಾಡಬಹುದೋ ಮಾಡಬಾರದೋ? ಇಂತಹ ಪ್ರಶ್ನೆಗಳೂ ಕನ್ನಡದ ವಿಜ್ಞಾನ ಸಂವಹನಕಾರರಿಗೆ ಎದುರಾಗುತ್ತಲೇ ಇರುತ್ತವೆ.
ಇದೇಕೆ ಹೀಗೆ? ಜನಪ್ರಿಯ ವಿಜ್ಞಾನವೇನು ಕನ್ನಡಕ್ಕೆ ಹೊಸದೇ? ಖಂಡಿತಾ ಅಲ್ಲ. ನಮ್ಮ ನಾಡಿನಲ್ಲಿ ಜನಪ್ರಿಯ ವಿಜ್ಞಾನ ಸಂವಹನಕ್ಕೆ ನೂರು ವರ್ಷಗಳಿಗೂ ಮೀರಿದ ಇತಿಹಾಸವಿದೆ. ಈ ಅವಧಿಯಲ್ಲಿ ಅನೇಕ ವಿಜ್ಞಾನಿಗಳು, ತಂತ್ರಜ್ಞರು, ಅಧ್ಯಾಪಕರು, ಪತ್ರಕರ್ತರು ಹಾಗೂ ಹವ್ಯಾಸಿ ಬರಹಗಾರರು ವಿಜ್ಞಾನ ಹಾಗೂ ತಂತ್ರಜ್ಞಾನದ ವಿಷಯಗಳನ್ನು ಕನ್ನಡಕ್ಕೆ ತಂದಿದ್ದಾರೆ. ಜ್ಞಾನಪೀಠ ಪುರಸ್ಕೃತರು ಜನಪ್ರಿಯ ವಿಜ್ಞಾನ ಸಂವಹನ ಕೈಗೊಂಡಿದ್ದು, ಜನಪ್ರಿಯ ವಿಜ್ಞಾನದ ಪುಸ್ತಕವೊಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರಕ್ಕೆ ಪಾತ್ರವಾದದ್ದೂ ಇದೆ.
ಕನ್ನಡ ಸಾಹಿತ್ಯ ಬಹಳ ಸಮೃದ್ಧವಾದದ್ದು. ಹೊಸ ಪ್ರಯತ್ನಗಳಿಗೆ, ಸಾಧನೆಗಳಿಗೆ ನಿಮಗೆ ಪ್ರೇರಣೆ ನೀಡಿದ ಸಾಹಿತ್ಯಕೃತಿ ಯಾವುದೆಂದು ಕೇಳಿದರೆ ಅದಕ್ಕೆ ಉತ್ತರಿಸುವವರೂ ಬೇಕಾದಷ್ಟು ಜನ ಇರಬಹುದು. ಹೀಗೆ ಪ್ರೇರಣೆ ನೀಡುವ ಕೃತಿಗಳ ಸಾಲಿನಲ್ಲಿ ಕನ್ನಡದ ವಿಜ್ಞಾನ ಬರಹಗಳು, ಪುಸ್ತಕಗಳೂ ಇರಬಹುದೇ?
ಜನಪ್ರಿಯ ವಿಜ್ಞಾನದ ಸ್ವರೂಪ ಕುರಿತು ಗೊಂದಲವಿರುವಂತೆಯೇ ಆ ಕುರಿತು ಕೆಲ ಪೂರ್ವಗ್ರಹಗಳೂ ಇವೆ. ವಿಜ್ಞಾನದ ಬರಹಗಳು ವಿದ್ಯಾರ್ಥಿಗಳಿಗಷ್ಟೇ ಸೀಮಿತವೆನ್ನುವುದು ಅವುಗಳಲ್ಲೊಂದು. ಮಾಹಿತಿ ಕೊಡುವುದಷ್ಟೇ ವಿಜ್ಞಾನ ಬರಹದ ಕೆಲಸ ಎನ್ನುವ ಅಭಿಪ್ರಾಯವೂ ಇದೆ. ವಿಜ್ಞಾನ-ತಂತ್ರಜ್ಞಾನದ ಬರಹಗಳು ಇಷ್ಟಕ್ಕೇ ಸೀಮಿತವಾಗಿಬಿಟ್ಟರೆ ಪ್ರೇರಣೆ ನೀಡುವ ಪ್ರಶ್ನೆಯೇ ಬರುವುದಿಲ್ಲವಲ್ಲ!
ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಬಹಳ ಹಿಂದೆಯೇ ಇಂತಹ ಪೂರ್ವಗ್ರಹಗಳನ್ನೆಲ್ಲ ಮೀರಿ ಬೆಳೆದಿದೆ ಎನ್ನುವುದು ಹೆಮ್ಮೆಯ ವಿಷಯ.
ಇಸ್ರೋ ಸಂಸ್ಥೆ ತನ್ನ ಕೆಲಸ ಪ್ರಾರಂಭಿಸಿದ್ದು ತಿರುವನಂತಪುರ ಸಮೀಪದ ಒಂದು ಹಳ್ಳಿಯಲ್ಲಿ ಎನ್ನುವುದನ್ನು ನೀವು ಕೇಳಿರಬಹುದು. ಅಂದಿನ ಪರಿಸ್ಥಿತಿ ಹೇಗಿತ್ತೆನ್ನುವ ಬಗ್ಗೆ ವಿವರಗಳನ್ನು ಓದಿ ತಿಳಿಯಬೇಕೆಂದರೆ ಸ್ವತಃ ವಿಕ್ರಂ ಸಾರಾಭಾಯಿಯವರೂ ಸೇರಿದಂತೆ ಹಲವರ ಬರಹಗಳು ಇಂಗ್ಲಿಷಿನಲ್ಲಿ ಸಿಗುತ್ತವೆ. ಇಂತಹ ಬರಹಗಳು ಕನ್ನಡದಲ್ಲೂ ಇವೆ ಎನ್ನುವುದು ವಿಶೇಷ.
ಇಸ್ರೋ ಆರಂಭದ ದಿನಗಳ ಮಾತು ಬಂದಾಗ ರಾಕೆಟ್ಟಿನ ಮೂತಿಯನ್ನು ಸೈಕಲ್ ಮೇಲಿಟ್ಟುಕೊಂಡು ನಡೆಯುತ್ತಿರುವ ವ್ಯಕ್ತಿಗಳ ಚಿತ್ರವೂ ಸಾಮಾನ್ಯವಾಗಿ ಪ್ರಸ್ತಾಪವಾಗುತ್ತದೆ. ಆ ಚಿತ್ರದಲ್ಲಿರುವ ವಿಜ್ಞಾನಿ ಕನ್ನಡದವರೇ ಆದ ಸಿ. ಆರ್. ಸತ್ಯ. ಅಬ್ದುಲ್ ಕಲಾಮ್, ರತನ್ ಟಾಟಾ ಮುಂತಾದವರ ಜೊತೆಗೆಲ್ಲ ಕೆಲಸಮಾಡಿದ್ದ ಸಾಧಕರು ಅವರು. ಅವರ 'ತ್ರಿಮುಖಿ' ಕೃತಿಯಲ್ಲಿ ಭಾರತೀಯ ಬಾಹ್ಯಾಕಾಶ ಕ್ಷೇತ್ರ ಪ್ರಾರಂಭಿಕ ವರ್ಷಗಳಲ್ಲಿ ಬೆಳೆದದ್ದು ಹೇಗೆನ್ನುವ ಕುರಿತು ಆಪ್ತವಾದ ಬರಹವಿದೆ. ಮಾಹಿತಿಯಷ್ಟೇ ಅಲ್ಲ, ಸೀಮಿತ ಸಂಪನ್ಮೂಲಗಳನ್ನೇ ಬಳಸಿಕೊಂಡು ಅದ್ಭುತ ಸಾಧನೆ ಮಾಡಿದವರ ಪ್ರೇರಣಾದಾಯಕ ಕಥನವೂ ಅಲ್ಲಿದೆ!
ಸತ್ಯ ಅವರ ಇನ್ನೊಂದು ಕೃತಿ 'ಅಳಿವಿಲ್ಲದ ಸ್ಥಾವರ', ಅವರು ತಿರುವನಂತಪುರದಲ್ಲಿದ್ದಾಗ ಅಲ್ಲಿನ ಅನಂತಪದ್ಮನಾಭ ದೇವಸ್ಥಾನದ ರಚನೆಯ ಬಗ್ಗೆ ನಡೆಸಿದ ಅಧ್ಯಯನದ ಕತೆ. ಅಲ್ಲಿರುವ ಮಂಟಪದ ಏಕಶಿಲಾ ವೇದಿಕೆ - 'ಒತ್ತಕ್ಕಲ್' - ಸೇರಿದಂತೆ ದೇಗುಲ ನಿರ್ಮಾಣದಲ್ಲಿ ಬಳಕೆಯಾಗಿರುವ ಕಲ್ಲುಗಳನ್ನು ಯಾರು ಎಲ್ಲಿಂದ ಹೇಗೆ ತಂದಿಟ್ಟಿರಬಹುದೆಂದು ಹುಡುಕಿ ಹೊರಟ ಲೇಖಕರ ಅನುಭವಗಳನ್ನು ಈ ಕೃತಿ ದಾಖಲಿಸಿದೆ. ಇತಿಹಾಸ ಹಾಗೂ ಶಿಲ್ಪಕಲೆಗಳ ಜೊತೆಯಲ್ಲೇ ಕಲ್ಲುಗಳ ಹಿಂದಿನ ವಿಜ್ಞಾನವನ್ನೂ ನವಿರಾಗಿ ತಲುಪಿಸಿರುವುದು ಈ ಪುಸ್ತಕದ ಹೆಗ್ಗಳಿಕೆ. ವಿಜ್ಞಾನಿಯೊಬ್ಬರು ಯಾವುದೇ ವಿಷಯದ ಬೆನ್ನತ್ತಿದರೆ ಅವರ ಅಧ್ಯಯನ-ವಿಶ್ಲೇಷಣೆ ಹೇಗೆಲ್ಲ ಸಾಗುತ್ತದೆ ಎನ್ನುವುದಕ್ಕೂ ಇದೊಂದು ಉತ್ತಮ ಉದಾಹರಣೆ.
ದೇಗುಲ ನಿರ್ಮಾಣದಲ್ಲಿ ಭಾಗಿಯಾಗಿದ್ದವರ ಬಗ್ಗೆ ಪ್ರಸ್ತಾಪಿಸುವಾಗ, ಸತ್ಯ ಒಂದುಕಡೆ "ಇಂತಹ ವ್ಯಕ್ತಿಗಳನ್ನು ನಮ್ಮ ಪ್ರಸ್ತುತ ಕಾಲದಲ್ಲಿ ಹೇಗಾದರೂ ಭೇಟಿ ಮಾಡಿ ಅವರ ಬಗ್ಗೆ ತಿಳಿದುಕೊಂಡರೆ ಎಷ್ಟು ಚೆನ್ನ ಅನ್ನುವ ಅಸಂಬದ್ಧ ಯೋಚನೆ ನನಗೆ ಆಗೊಮ್ಮೆ ಈಗೊಮ್ಮೆ ಬರುತ್ತದೆ," ಎಂದು ಬರೆದಿದ್ದಾರೆ. ಕನ್ನಡದಲ್ಲಿ ಜನಪ್ರಿಯ ವಿಜ್ಞಾನದ ಅತ್ಯುತ್ತಮ ಕೃತಿಗಳಲ್ಲೊಂದಾದ 'ಹಸುರು ಹೊನ್ನು' ಓದುವಾಗ ನನಗೂ ಅಂತಹ ಯೋಚನೆ ಬರುತ್ತದೆ - ಬಿ. ಜಿ. ಎಲ್. ಸ್ವಾಮಿಯವರನ್ನು ಒಮ್ಮೆ ಭೇಟಿಯಾಗುವಂತಿದ್ದರೆ ಹೇಗಿರುತ್ತಿತ್ತು ಅಂತ!
ಕನ್ನಡದಲ್ಲಿ ಜನಪ್ರಿಯ ವಿಜ್ಞಾನ ಸಂವಹನ ಕೈಗೊಂಡವರಲ್ಲಿ ವಿಜ್ಞಾನಿಗಳಿದ್ದಾರೆ, ಅಧ್ಯಾಪಕರೂ ಇದ್ದಾರೆ. ಅವೆರಡೂ ಆಗಿದ್ದ ಸ್ವಾಮಿಯವರ ಬರಹಗಳು ಸಾಹಿತ್ಯ, ಇತಿಹಾಸ, ಹಾಸ್ಯ ಮೊದಲಾದವುಗಳ ನಡುವೆ ವಿಜ್ಞಾನವನ್ನೂ ಅತ್ಯಂತ ಸೊಗಸಾಗಿ ತಿಳಿಹೇಳುತ್ತವೆ. ಹೊಸ ವಿಷಯಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ನಮ್ಮನ್ನು ಪ್ರೇರೇಪಿಸುತ್ತವೆ.
ಸಂಪೂರ್ಣ ಹೊಸದಾದ ವಿಷಯವನ್ನು ಕನ್ನಡದಲ್ಲಿ ಹೇಳುವುದು ಹೇಗೆ? ಹಾಗೊಂದು ಪ್ರಯತ್ನಕ್ಕೆ ಕೈಹಾಕುವವರಿಗೆ ನಳಿನಿ ಮೂರ್ತಿಯವರ ಬರಹಗಳು ಮಾರ್ಗದರ್ಶನ ಮಾಡಬಲ್ಲವು. ಕೆನಡಾದಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಕಂಪ್ಯೂಟರ್ ವಿಜ್ಞಾನದ ಪ್ರಾಥಮಿಕ ಅಂಶಗಳನ್ನು ೧೯೮೦ರಷ್ಟು ಹಿಂದೆಯೇ ಕನ್ನಡದ ಓದುಗರಿಗೆ ಪರಿಚಯಿಸಿದ್ದರು.
ಬರಹವಷ್ಟೇ ಅಲ್ಲ, ಬರಹದ ಹಿಂದಿನ ಪ್ರಯತ್ನಗಳೂ ಪ್ರೇರಣೆ ನೀಡುವುದು ಸಾಧ್ಯ. ವಿಜ್ಞಾನದ ಅಧ್ಯಾಪಕರಾಗಿದ್ದ ಬೆಳ್ಳಾವೆ ವೆಂಕಟನಾರಣಪ್ಪನವರು ತಮ್ಮ ಸಂಗಡಿಗರೊಂದಿಗೆ ಒಂದು ಶತಮಾನಕ್ಕೂ ಹಿಂದೆ ವಿಜ್ಞಾನ ಪತ್ರಿಕೆಯನ್ನೂ ಜನಪ್ರಿಯ ವಿಜ್ಞಾನದ ಪುಸ್ತಕಗಳನ್ನೂ ಹೊರತರಲು ಎಷ್ಟು ಕಷ್ಟಪಟ್ಟಿರಬಹುದು? ಅಂತರಜಾಲವೂ ಸರ್ಚ್ ಎಂಜಿನ್ನುಗಳೂ ಇಲ್ಲದ ಎಪ್ಪತ್ತರ ದಶಕದಲ್ಲಿ ನಿರಂಜನರು, ಅಡ್ಯನಡ್ಕ ಕೃಷ್ಣಭಟ್ಟರು 'ಜ್ಞಾನಗಂಗೋತ್ರಿ'ಯಂತಹ ವಿಶ್ವಕೋಶವನ್ನು ಅತ್ಯಂತ ಕಡಿಮೆ ಸಮಯದಲ್ಲಿ ಅದು ಹೇಗೆ ರೂಪಿಸಿರಬಹುದು? ಪ್ರಾಯಶಃ ಇಂತಹ ಸಾಹಸಗಳ ಕತೆಯೇ ಒಂದು ಪುಸ್ತಕವಾಗಬಹುದೋ ಏನೋ.
ವಿಜ್ಞಾನಿಗಳಲ್ಲದವರು, ವಿಜ್ಞಾನದ ಅಧ್ಯಾಪಕರಲ್ಲದವರು ಜನಪ್ರಿಯ ವಿಜ್ಞಾನ ಸಂವಹನ ಮಾಡಿಲ್ಲವೇ? ಖಂಡಿತಾ ಮಾಡಿದ್ದಾರೆ. ಪಂಜೆ ಮಂಗೇಶರಾಯರು, ಶಿವರಾಮ ಕಾರಂತ, ಪಾ. ವೆಂ. ಆಚಾರ್ಯ ಸೇರಿದಂತೆ ಹಲವು ಮಹನೀಯರ ಬರಹಗಳು ಇದಕ್ಕೆ ಉತ್ತಮ ಉದಾಹರಣೆಗಳು. ಪೂರ್ಣಚಂದ್ರ ತೇಜಸ್ವಿಯವರೂ ತಮ್ಮ ಬರಹಗಳಲ್ಲಿ ವಿಜ್ಞಾನದ ವಿಷಯಗಳಿಗೆ ಸ್ಥಾನಕೊಟ್ಟಿದ್ದರು. ವಿಜ್ಞಾನದ ಹಿನ್ನೆಲೆಯಿಲ್ಲದಿದ್ದರೂ ಜನಪ್ರಿಯ ವಿಜ್ಞಾನವನ್ನು ಜನರಿಗೆ ತಲುಪಿಸಬಹುದೇ? ಆ ಪ್ರಶ್ನೆಗೆ ಇವರೆಲ್ಲರ ಬರಹಗಳೇ ಉತ್ತರ!
ನವೆಂಬರ್ ೧೧, ೨೦೨೪ರ ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ