ವೃತ್ತಿಜೀವನದ ಕಹಿನೆನಪುಗಳನ್ನು ಹಿಂದಿಕ್ಕಿ, ಸ್ವಜನರ ಕುಹಕಕೋಟಲೆಗಳನ್ನು ಬದಿಗೊತ್ತಿ  ವನ್ಯಜೀವಿಸಂರಕ್ಷಣೆಯ ಅಗತ್ಯಮಹತ್ತ್ವಗಳನ್ನು ನಾಡಿನ ಮೂಲೆಮೂಲೆಗಳಲ್ಲಿ ಸಂತನಂತೆ ಸಾರುತ್ತ ಸಾಗಿದ ಚಿಣ್ಣಪ್ಪ- ವೃತ್ತಿಪ್ರವೃತ್ತಿಗಳೆರಡರ ಹಿರಿಮೆಯನ್ನೂ ಎತ್ತಿಹಿಡಿದ ನಿಷ್ಠಾವಂತ ನಿಸರ್ಗವಾದಿ.
ವೃತ್ತಿಜೀವನದ ಕಹಿನೆನಪುಗಳನ್ನು ಹಿಂದಿಕ್ಕಿ, ಸ್ವಜನರ ಕುಹಕಕೋಟಲೆಗಳನ್ನು ಬದಿಗೊತ್ತಿ ವನ್ಯಜೀವಿಸಂರಕ್ಷಣೆಯ ಅಗತ್ಯಮಹತ್ತ್ವಗಳನ್ನು ನಾಡಿನ ಮೂಲೆಮೂಲೆಗಳಲ್ಲಿ ಸಂತನಂತೆ ಸಾರುತ್ತ ಸಾಗಿದ ಚಿಣ್ಣಪ್ಪ- ವೃತ್ತಿಪ್ರವೃತ್ತಿಗಳೆರಡರ ಹಿರಿಮೆಯನ್ನೂ ಎತ್ತಿಹಿಡಿದ ನಿಷ್ಠಾವಂತ ನಿಸರ್ಗವಾದಿ.T G Srinidhi / ejnana.com

ವಿಶ್ವ ವನ್ಯಜೀವಿ ದಿನ ವಿಶೇಷ: ಕಾಡಿನ ಪಾಠ ಹೇಳಿದ ಚಿಣ್ಣಪ್ಪ ಮೇಷ್ಟ್ರು

ಮುಗ್ಧತೆ ಮೀರಿದ ಸ್ವಾರ್ಥಪರರಾದ ನಮ್ಮ ತಲೆಮಾರಿನವರನ್ನು ಅಲಕ್ಷಿಸಿ, ನಮಗೆ ವನ್ಯಸಂರಕ್ಷಣೆಯ ಪಾಠಕಲಿಸುವ ಹೊಣೆಯನ್ನು ನಮ್ಮ ಎಳೆಯ ಪೀಳಿಗೆಯವರಿಗೆ ವಹಿಸುವ ಕೆಲಸವನ್ನು ಶಕ್ತಿಮೀರಿ ಕೈಗೊಂಡವರು ಚಿಣ್ಣಪ್ಪ.

ಮೈಸೂರು ಜಿಲ್ಲೆಯ ಗ್ರಾಮಾಂತರ ಪ್ರದೇಶದ ಒಂದು ಪ್ರೌಢಶಾಲೆಯ ಸಭಾಂಗಣ. ನಾನು ಸ್ಲೈಡ್ ಪ್ರೊಜೆಕ್ಟರಿನಿಂದ ಬಿಳಿಯ ಪರದೆಯ ಮೇಲೆ ಮೂಡಿಸುತ್ತಿದ್ದ ವನ್ಯಪ್ರಪಂಚದ ಚಿತ್ರಗಳಿಗೆ ಚಿಣ್ಣಪ್ಪನವರಿಂದ ಸಂರಕ್ಷಣಾ ಮಹತ್ತ್ವವನ್ನು ಕುರಿತ ವ್ಯಾಖ್ಯಾನ ನಡೆದಿತ್ತು. ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಮಕ್ಕಳು ಆಕರ್ಷಕ ವರ್ಣಚಿತ್ರಗಳಿಗೆ ಮೆಚ್ಚುಗೆ ಸೂಚಿಸುವ ಉದ್ಗಾರಗಳನ್ನು ಹೊರತುಪಡಿಸಿದಂತೆತದೇಕಚಿತ್ತರಾಗಿ ಆಲಿಸುತ್ತ ಕುಳಿತಿದ್ದರು. ಪರದೆಯ ಮೇಲೆ ಹುಲಿಯ ಚಿತ್ರ ಕಾಣಿಸಿಕೊಂಡಿತು. ನಿಸರ್ಗದಲ್ಲಿ ಹುಲಿಯಂಥ ಪ್ರಾಣಿಯ ಪಾತ್ರವೇನೆಂಬುದನ್ನು ಚಿಣ್ಣಪ್ಪ ವಿವರಿಸುತ್ತಿರುವಂತೆಯೇ ಹುಡುಗನೊಬ್ಬ ಎದ್ದು ನಿಂತ. "ಒಂದು ಪ್ರಶ್ನೆ ಕೇಳ್ಲಾ ಸರ್?” ಎಂದ. ಅಲ್ಲಿದ್ದ ಅಧ್ಯಾಪಕರು ಅವನನ್ನು ತಡೆಯುವ ಯತ್ನದಲ್ಲಿದ್ದಾಗ, ಚಿಣ್ಣಪ್ಪ, "ಪರವಾಗಿಲ್ಲ ಕೇಳಲಿ ಬಿಡಿ" ಎಂದರು. "ಸರ್, ಇದೆಲ್ಲ ನಮಗೆ ಯಾಕೆ ಬೇಕು?" ಎಂಬುದು ಹುಡುಗನ ಪ್ರಶ್ನೆ.

ಇಲಿಯಿಂದ ಹುಲಿಯವರೆಗೆ, ಮಂಗನಿಂದ ಮಾನವನವರೆಗೆ ಎಲ್ಲವೂ ಪ್ರಕೃತಿಯ ಭಾಗ. ಪ್ರತಿಯೊಂದಕ್ಕೂ ಈ ಪ್ರಪಂಚದಲ್ಲಿ ಅದರದ್ದೇ ಆದ ಸ್ಥಾನವಿದೆ. ನಮಗೆ ಯಾಕೆ ಬೇಕು ಎನ್ನುವುದು ಮುಖ್ಯವಲ್ಲ ಎಂದು ಚಿಣ್ಣಪ್ಪ ಉತ್ತರಿಸಿದರು. ಈ ಪ್ರಪಂಚ ನಮ್ಮದು. ನಮಗೇನು ಬೇಕೋ ಅವು ಇಲ್ಲಿರೋದು ಮುಖ್ಯ. ಆನೆ, ಹುಲಿ, ಕರಡಿ ಇವು ಯಾವುದೂ ನಮ್ಗೆ ಬೇಕಿಲ್ಲ ಎಂದು ಹುಡುಗ ವಾದಿಸಿದ. ಅವೆಲ್ಲ ಇರದಿದ್ದರೆ ಕಾಡೇ ಇರುವುದಿಲ್ಲ ಎಂದು ವಿವರಿಸಹೊರಟಾಗ, ಕಾಡೂ ಬೇಕಾಗಿಲ್ಲ, ನಮಗೆ ಊರೇ ಸಾಕಲ್ಲ ಎಂದುಬಿಟ್ಟ. ಅವನ ಉದ್ಧಟತನಕ್ಕೆ ಚಿಣ್ಣಪ್ಪನಿಗೆ ಕೋಪವೇನೂ ಬರಲಿಲ್ಲ. ಮಗೂ, ಕಾಡಿಲ್ಲದಿದ್ದರೆ ಮಳೆ, ಶುದ್ಧಗಾಳಿ ಏನೂ ದೊರಕದೆ ಎಲ್ಲರೂ ಸಾಯಬೇಕಾಗುತ್ತದೆ, ಅಲ್ಲವೇ ಎಂದರು. ಹುಡುಗನೋ ತನ್ನ ಪಟ್ಟುಬಿಡದೆ, ಸತ್ತರೆ ಸಾಯ್ತೀವಿ, ಕಾಡಿಂದ ನಾವು ಬದುಕಬೇಕಾಗಿಲ್ಲ ಎಂದು ಮೊಂಡನಂತೆ ವರ್ತಿಸಿದ. ಶಾಲೆಯ ಉಪಾಧ್ಯಾಯರು ಸಿಟ್ಟಿನಿಂದ ಎದ್ದು ಅವನತ್ತ ಹೊರಟಾಗ ತಡೆದ ಚಿಣ್ಣಪ್ಪನವರು ಆ ಹುಡುಗನನ್ನು ಕರೆದು ತಮ್ಮ ಪಕ್ಕ ನಿಲ್ಲಿಸಿಕೊಂಡರು. ಮಕ್ಕಳತ್ತ ತಿರುಗಿ ನಿಮ್ಮ ಸ್ನೇಹಿತ ಮಾತನಾಡಿದ್ದರಲ್ಲಿ ಯಾವ ತಪ್ಪೂ ಇಲ್ಲ , ಅಲ್ಲವೇ ಎಂದರು. ಮಕ್ಕಳೆಲ್ಲ ತಪ್ಪು ತಪ್ಪು ಎಂದು ಕೂಗಿಕೊಂಡರು.

ಇಲ್ಲ, ತಪ್ಪಿಲ್ಲ. ಅವನು ಈ ನಿಸರ್ಗದ ಬಗೆಗೆ ಇಡೀ ಮನುಷ್ಯಕುಲದ ತಾತ್ಸಾರತಿರಸ್ಕಾರಗಳನ್ನು ತುಂಬ ಚೆನ್ನಾಗಿ ತನ್ನ ಮಾತಿನಲ್ಲಿ ತೋರಿಸಿಕೊಟ್ಟಿದ್ದಾನೆ. ಈ ಪ್ರಪಂಚದಲ್ಲಿರುವ ಇತರ ಎಲ್ಲ ಜೀವಿಗಳೂ ತಮ್ಮ ಬದುಕಿಗೆ ಆಧಾರವಾಗಿರುವ ಪ್ರಕೃತಿ ಯಾವಾಗಲೂ ಚೆನ್ನಾಗಿರಲಿ, ಹಾಗಿದ್ದರೆ ಮಾತ್ರ ತಾವೂ ತಮ್ಮ ಸಂತತಿಯೂ ಉಳಿಯಬಹುದು ಎಂದು ನಂಬಿರುತ್ತವೆ. ಹಾಗೆಯೇ ಪ್ರಕೃತಿಗೆ ವಿಧೇಯವಾಗಿ ಉಳಿಯುತ್ತವೆ. ಆದರೆ, ಮನುಷ್ಯ ಹಾಗಲ್ಲ. ತಾನು ಸತ್ತರೂ ಪರವಾಗಿಲ್ಲ, ಪ್ರಕೃತಿ ನಾಶವಾಗಿ ಹೋಗಲಿ, ತನ್ನ ಸ್ವಾರ್ಥಸಾಧನೆಯೊಂದೇ ಮುಖ್ಯ, ಮುಂದೆ ತನ್ನದೇ ಸಂತತಿಗೆ ಅಪಾಯವಾದರೂ ಚಿಂತೆಯಿಲ್ಲ ಎನ್ನುವ ರಾಕ್ಷಸಧೋರಣೆಯಿರುವ ಮನುಷ್ಯನಿಂದಾಗಿ ನಿಸರ್ಗಕ್ಕೆ ಏನೇನು ಅಪಾಯಗಳಾಗುತ್ತಿವೆ ಎಂಬುದನ್ನು ನಿಮ್ಮ ಸ್ನೇಹಿತ ಹೇಳಿದ. ಹೌದು ತಾನೇ ಎಂದು ಆ ಹುಡುಗನ ಹೆಗಲ ಮೇಲೆ ಕೈಯಿಟ್ಟು ಚಿಣ್ಣಪ್ಪ ಕೇಳಿದರು. ಹುಡುಗನಿಗೆ ಏನು ಹೇಳಬೇಕೋ ತೋಚದೆ ಸುಮ್ಮನೆ ತಲೆಯಾಡಿಸಿದ. ಮಕ್ಕಳೆಲ್ಲ ಚಪ್ಪಾಳೆ ತಟ್ಟಿದರು.

ಅರಣ್ಯ, ವನ್ಯಜೀವನಗಳ ಬಗೆಗೆ ಹೆಚ್ಚೇನೂ ತಿಳಿಯದಿದ್ದ ಆ ಮುಗ್ಧಬಾಲಕ ವರ್ತಮಾನದ ಹಿರಿಯ ಪೀಳಿಗೆಯ ನಮ್ಮೆಲ್ಲರ ಧೋರಣೆಯ ಪ್ರತಿನಿಧಿಯಂತೆ ನನಗೆ ಕಂಡ. ಮುಗ್ಧತೆ ಮೀರಿದ ಸ್ವಾರ್ಥಪರರಾದ ನಮ್ಮ ತಲೆಮಾರಿನವರನ್ನು ಅಲಕ್ಷಿಸಿ, ನಮಗೆ ವನ್ಯಸಂರಕ್ಷಣೆಯ ಪಾಠಕಲಿಸುವ ಹೊಣೆಯನ್ನು ನಮ್ಮ ಎಳೆಯ ಪೀಳಿಗೆಯವರಿಗೆ ವಹಿಸುವ ಕೆಲಸವನ್ನು ಚಿಣ್ಣಪ್ಪ ಶಕ್ತಿಮೀರಿ ಕೈಗೊಂಡರು.

ಲೇಖಕ ಟಿ. ಎಸ್. ಗೋಪಾಲ್ ಅವರೊಂದಿಗೆ ಚಿಣ್ಣಪ್ಪ
ಲೇಖಕ ಟಿ. ಎಸ್. ಗೋಪಾಲ್ ಅವರೊಂದಿಗೆ ಚಿಣ್ಣಪ್ಪT G Srinidhi / ejnana.com

ಕಾಡಿನಂಚಿನ ಹಳ್ಳಿಗಳಲ್ಲಿ ವಾಸಿಸುವ ಮಕ್ಕಳಲ್ಲಿ ನಿಸರ್ಗಪ್ರೇಮವನ್ನು ಮೂಡಿಸಬಲ್ಲ ಇಂತಹ ನೂರಾರು ಕಾರ್ಯಕ್ರಮಗಳನ್ನು ನಿರೂಪಿಸಿದ ಚಿಣ್ಣಪ್ಪನವರು ಹಿರಿಯ ಪೀಳಿಗೆಯವರು ನಿಸರ್ಗಕ್ಕೆ ಎಸಗಿದ ಘೋರ ಅಪಚಾರವನ್ನು ಮನದಟ್ಟುಮಾಡಿಸಲು ಯತ್ನಿಸಿದರು. ಪತ್ರಕರ್ತರಿಂದ ಸರ್ಕಾರಿ ಅಧಿಕಾರಿಗಳವರೆಗೆ, ಶಿಕ್ಷಕರಿಂದ ಮಠಾಧೀಶರವರೆಗೆ ಸಮಾಜದ ಎಲ್ಲ ವರ್ಗಗಳ ಪ್ರತಿನಿಧಿಗಳೊಡನೆ ಸಂವಾದಗಳನ್ನೇರ್ಪಡಿಸಿ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸಲು ನಿರಂತರವಾಗಿ ಶ್ರಮಿಸಿದರು. ಅರಣ್ಯ ಇಲಾಖೆಯಲ್ಲಿ ಇಪ್ಪತ್ತಾರು ವರ್ಷಗಳ ಸೇವೆ ಸಲ್ಲಿಸಿ 1993ರಲ್ಲಿ ಸ್ವಯಂನಿವೃತ್ತಿ ಪಡೆದ ನಂತರ ಅವರ ಜೀವಿತದ ಕೊನೆಯ ದಿನಗಳವರೆಗೂ ವನ್ಯಜೀವಿ ಸಂರಕ್ಷಣೆಯ ಸಂದೇಶ ಸಾರುವುದೇ ಚಿಣ್ಣಪ್ಪನವರ ಧ್ಯೇಯಮಂತ್ರವಾಗಿತ್ತು. ವೃತ್ತಿಜೀವನದ ಕಹಿನೆನಪುಗಳನ್ನು ಹಿಂದಿಕ್ಕಿ, ಸ್ವಜನರ ಕುಹಕಕೋಟಲೆಗಳನ್ನು ಬದಿಗೊತ್ತಿ ವನ್ಯಜೀವಿಸಂರಕ್ಷಣೆಯ ಅಗತ್ಯಮಹತ್ತ್ವಗಳನ್ನು ನಾಡಿನ ಮೂಲೆಮೂಲೆಗಳಲ್ಲಿ ಸಂತನಂತೆ ಸಾರುತ್ತ ಸಾಗಿದ ಚಿಣ್ಣಪ್ಪ- ವೃತ್ತಿಪ್ರವೃತ್ತಿಗಳೆರಡರ ಹಿರಿಮೆಯನ್ನೂ ಎತ್ತಿಹಿಡಿದ ನಿಷ್ಠಾವಂತ ನಿಸರ್ಗವಾದಿ. ಅವರ ಸಿಟ್ಟು,ದುಡುಕು, ಟೀಕೆ, ಸಾಹಸ, ಆಕ್ಷೇಪ, ಹೋರಾಟಗಳೇನಿದ್ದರೂ ವನ್ಯಜೀವಿ ಸಂರಕ್ಷಣೆಯ ಪರ ವಕಾಲತ್ತಿನ ಪ್ರತಿಕ್ರಿಯೆಗಳೇ.

ನಾಗರಹೊಳೆಯ ವಿವಿಧ ಅರಣ್ಯವಲಯಗಳಲ್ಲಿ ಅಧಿಕಾರಿಯಾಗಿ ಚಿಣ್ಣಪ್ಪ ಸಲ್ಲಿಸಿದ ಸೇವೆಯ ಅಧ್ಯಾಯಗಳು ವನ್ಯಜೀವಿಸಂರಕ್ಷಣಾಸಕ್ತರಿಗೆ ಅತ್ಯುತ್ತಮ ಅಧ್ಯಯನಸಾಮಗ್ರಿಯೆನ್ನುವುದರಲ್ಲಿ ಸಂಶಯವಿಲ್ಲ. ಅವರು ಗುರುಮುಖೇನ ಕಲಿತುದಕ್ಕಿಂತ ನಿಸರ್ಗದ ನೇರಶಿಷ್ಯನಾಗಿ ಪಡೆದ ಶಿಕ್ಷಣವೇ ಮಿಗಿಲಾದದ್ದು. ಅವರ ಕಾರ್ಯಕ್ಷಮತೆಯೇನಿದ್ದರೂ ಸ್ವಾನುಭವದಿಂದ, ಕ್ಷೇತ್ರಕಾರ್ಯಪ್ರಯೋಗಗಳಿಂದ ಫಲಿತವಾದ ಸಿದ್ಧಿ. ಎಲ್ಲಿಯೋ ಚೆದುರಿದ ಎರಡು ಹುಲ್ಲುಕಡ್ಡಿ ತೋರಿಸಿ "ಈಗ ಆನೆ ಹೋಗಿದೆ" ಎನ್ನುವುದಾಗಲಿ, ಮರವೊಂದರ ಕಾಂಡದ ಬಳಿ ಉಸಿರೆಳೆಯುತ್ತ "ಹುಲಿ ಇತ್ತ ಬಂದುಹೋಗಿದೆ" ಎನ್ನುವುದಾಗಲಿ ಯಾರೋ ಕಾಲಜ್ಞಾನಿಯೊಬ್ಬನ ಹೇಳಿಕೆಗಳಂತೆ ಭಾಸವಾಗುತ್ತಿದ್ದವು . ಅಲ್ಲೇ ಮುಂದೆ ಆನೆಯ ಹಸಿ ಲದ್ದಿಯನ್ನೋ ಹುಲಿಯ ಹೆಜ್ಜೆಯನ್ನೋ ಕಾಣುವಾಗ ಚಿಣ್ಣಪ್ಪನವರ ವನ್ಯಜ್ಞಾನ ಅದೆಷ್ಟು ಖಚಿತ ಎಂದು ವಿಸ್ಮಯವೂ ಮೂಡುತ್ತಿತ್ತು!

ಎಪ್ಪತ್ತರ ದಶಕದಲ್ಲಿ ಅರಣ್ಯ ಇಲಾಖೆಯ ಉದ್ಯೋಗಿಯಾಗಿ ನೇಮಕಗೊಂಡ ಕಾಲಕ್ಕೆ ಅರಣ್ಯಪಾಲನೆಗೆ ಕಂಟಕವಾಗಿದ್ದ ಮರಗಳ್ಳತನ, ಕಳ್ಳಬೇಟಿಗಳನ್ನು ನಿಯಂತ್ರಣಕ್ಕೆ ತರಲು ಚಿಣ್ಣಪ್ಪ ಪಟ್ಟ ಪಾಡು ಅಷ್ಟಿಷ್ಟಲ್ಲ. ನಟ್ಟಿರುಳ ಕತ್ತಲಲ್ಲೂ ದಟ್ತಕಾಡಿನಲ್ಲಿ ನಡೆಯಬಲ್ಲ ಕೌಶಲ, ಕುಖ್ಯಾತ ಬೇಟಿಗಾರರನ್ನು ಅಟ್ಟಾಡಿಸಬಲ್ಲ ಕ್ಷಾತ್ರಧೀರತೆ, ಅವರ ಧೈರ್ಯಸ್ಥೈರ್ಯಗಳು ವದಂತಿಗಳಾಗಿ ಪಡೆದುಕೊಂಡ ಅತಿಮಾನುಷರೂಪ- ಎಲ್ಲವೂ ಸೇರಿ ಚಿಣ್ಣಪ್ಪನ ಅರಣ್ಯಸಂರಕ್ಷಣಾಕಾರ್ಯ ಅಸಾಮಾನ್ಯಶಕ್ತಿಯನ್ನು ಪಡೆದುಕೊಂಡಿತ್ತು. ಅವರ ನಿಷ್ಠುರತೆ ಸ್ವಾಭಿಮಾನಗಳು ಗರ್ವದರ್ಪಗಳ ಅವಗುಣದಂತೆ ಬಹುಜನರಿಗೆ ಭಾಸವಾಗುತ್ತಿದ್ದವು. ತಮ್ಮ ನಡೆನುಡಿಗಳಲ್ಲಿ ಚಿಣ್ಣಪ್ಪ ಎಂದೂ ಯಾವ ಹೊಂದಾಣಿಕೆಯನ್ನೂ ಮಾಡಿಕೊಂಡವರಲ್ಲ. ಈ ಬಿಟ್ಟಬಾಣದ ರೀತಿ ಅವರಿಗೆ ಗೆಲುವು ತಂದುಕೊಟ್ಟದ್ದಲ್ಲದೆ ವೈರಿಗಳನ್ನೂ ಇದಿರುನಿಲ್ಲಿಸಿತು. ಕೆಲವರು ಪೋಲೀಸ್ ಅಧಿಕಾರಿಗಳು ಅವರ ಮೇಲೆ ಯಾವುದೋ ದೋಷಾರೋಪ ಹೊರಿಸಿ, ಕೈಗೆ ಕೋಳ ತೊಡಿಸಿ ಊರ ಬೀದಿಯಲ್ಲಿ ಮೆರೆವಣಿಗೆ ಮಾಡಿದರೆಂಬುದು ಚಿಣ್ಣಪ್ಪನವರ ನಿಷ್ಠುರತೆಯ ವಿಪರಿಣಾಮ ಹೇಗಿತ್ತೆನ್ನುವುದಕ್ಕೆ ಒಂದು ಉದಾಹರಣೆ (ಕಾಲಾಂತರದಲ್ಲಿ, ಅವರಿಗಾದ ಮಾನನಷ್ಟದ ದಂಡವನ್ನು ಸಂಬಂಧಪಟ್ಟ ಅಧಿಕಾರಿಗಳಿಂದಲೇ ವಸೂಲುಮಾಡುವಂತೆ ನ್ಯಾಯಾಲಯ ಆದೇಶಿಸಿದ್ದು ಬೇರೆ ವಿಷಯ).

ವೈಲ್ಡ್ ಲೈಫ್ ಫಸ್ಟ್ ಎಂಬ ಸರ್ಕಾರೇತರ ಸೇವಾಸಂಘಟನೆಯ ಅಧ್ಯಕ್ಷರಾಗಿಯೂ ಚಿಣ್ನಪ್ಪನವರ ಸೇವೆ, ಸಾಧನೆಗಳು ಗಮನಾರ್ಹ. ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ನಿರ್ವಹಣೆಯಿಂದ ವನ್ಯಜೀವಿ ವಿಭಾಗದ ಬೇರ್ಪಡಿಕೆ, ಅರಣ್ಯದೊಳಗೆ ಹಾದುಹೋಗುವ ಹೆದ್ದಾರಿಯಲ್ಲಿ ವಾಹನಗಳ ರಾತ್ರಿಸಂಚಾರಕ್ಕೆ ನಿರ್ಬಂಧ, ಎಲ್ಲಕ್ಕಿಂತ ಮುಖ್ಯವಾಗಿ, ಕುದುರೆಮುಖದ ಗಣಿಗಾರಿಕೆಯ ತಡೆಗೆ ಸರ್ವೋಚ್ಚ ನ್ಯಾಯಾಲಯದಲ್ಲಿ ಹೋರಾಟ- ಮೊದಲಾದವುಗಳ ಮೂಲಕ ಚಿಣ್ಣಪ್ಪನವರ ತಂಡ ಸಾಧಿಸಿದ ಯಶಸ್ಸು ನಾಡಿನ ವನ್ಯಜೀವನಕ್ಕೆ ಲಭಿಸಿದ ಶ್ರೇಯಸ್ಸೂ ಹೌದು.

ಏರುತ್ತಿರುವ ಜನಸಂಖ್ಯೆ, ಸರ್ಕಾರದ ಜನಪರವಾದ ನೀತಿನಿರೂಪಣೆ, ಅರಣ್ಯಗಳ ನಿರ್ವಹಣೆಯಲ್ಲಿನ ದೋಷ, ವನ್ಯಜೀವಿಗಳ ಬಗೆಗಿನ ನಿಷ್ಕರುಣೆ ಅನಾದರಗಳಿಂದಾಗಿ ಇಂದು ಅರಣ್ಯಪಾಲನೆ ಮತ್ತು ವನ್ಯಜೀವಿಸಂರಕ್ಷಣೆಗಳು ಸರ್ಕಾರಕ್ಕೆ ದೊಡ್ಡ ಸವಾಲೆನಿಸಿವೆ. ಪ್ರಸ್ತುತ, ಚಿಣ್ಣಪ್ಪನವರಿಗಿದ್ದ ಯೋಧನಿಷ್ಠೆ ನಿಲುವುಗಳನ್ನು ಒಂದು ಸಾಧಾರಣ ಮಾದರಿಯಾಗಿ ಮುಂದಿಟ್ಟುಕೊಳ್ಳಲೂ ಸಾಧ್ಯವಾಗದ ಸಂಶಯ ನಮ್ಮನ್ನು ಕಾಡುತ್ತಿದೆ. ಚಿಣ್ಣಪ್ಪನಂಥವರ ಸಾವಿನಿಂದಾದ ನಷ್ಟವನ್ನು ನಾಗರಹೊಳೆಯ ವನ್ಯಜೀವಿಗಳಂತೂ ಹೇಳಿಕೊಳ್ಳಲಾರವು ; ಇನ್ನು ಅರಣ್ಯನಾಶಕ್ಕೆ ಪಣತೊಟ್ಟು ನಿಂತ ಮನುಕುಲಕ್ಕೆ ಅವರ ಅಗಲಿಕೆಯಿಂದ ಆಗಬೇಕಾದುದೇನು?

ಮಾರ್ಚ್ ೩, ೨೦೨೪ರ ಉದಯವಾಣಿಯಲ್ಲಿ ಪ್ರಕಟವಾದ ಲೇಖನ

Related Stories

No stories found.
logo
ಇಜ್ಞಾನ Ejnana
www.ejnana.com