ಫೇಸ್ಬುಕ್ನಿಂದಾಗಿ ಸಮಯ ವ್ಯರ್ಥವಾಗುತ್ತದೆ ಎಂದು ಅನೇಕರು ಹೇಳುತ್ತಾರೆ. ಆದರೆ ಅದೇ ಫೇಸ್ಬುಕ್ ಅನ್ನು ಉಪಯುಕ್ತ ಮಾಹಿತಿಯ ಪ್ರಸಾರಕ್ಕೆ ಬಳಸುವ ಹಲವು ಪ್ರಯತ್ನಗಳೂ ನಡೆದಿವೆ. ಇಂತಹ ಪ್ರಯತ್ನಗಳಲ್ಲಿ 'ಕನ್ನಡ ಸಂಪದ' ಫೇಸ್ಬುಕ್ ಸಮುದಾಯವೂ ಒಂದು. ಈವರೆಗೆ ಮೂವತ್ತು ಸಾವಿರಕ್ಕೂ ಹೆಚ್ಚು ಮಂದಿ ಮೆಚ್ಚಿರುವ ಈ ಸಮುದಾಯವನ್ನು ದುಬೈ ಕನ್ನಡಿಗ ತಿರು ಶ್ರೀಧರ ನಿರ್ವಹಿಸುತ್ತಿದ್ದಾರೆ. ಸಾಹಿತ್ಯ, ಸಂಗೀತ, ಚಲನಚಿತ್ರ, ರಂಗಭೂಮಿ, ಉದ್ದಿಮೆ, ವಿಜ್ಞಾನ-ತಂತ್ರಜ್ಞಾನ ಮುಂತಾದ ಹಲವು ಕ್ಷೇತ್ರಗಳ ಸಾಧಕರ ಪರಿಚಯಗಳು ಇಲ್ಲಿ ನಿರಂತರವಾಗಿ ಮೂಡಿಬರುತ್ತಿವೆ. ಈ ಪುಟಕ್ಕೆ ಪೂರಕವಾಗಿ ಸಂಸ್ಕೃತಿ ಸಲ್ಲಾಪ ಎಂಬ ಜಾಲತಾಣ ಕೂಡ ಕಾರ್ಯನಿರ್ವಹಿಸುತ್ತಿದೆ.
ಹೆಚ್ಚಿನ ವಿವರಗಳಿಗೆ: facebook.com/kannadasampada
ಕನ್ನಡ ಭಾಷೆ ಹಾಗೂ ಪದಸಂಪತ್ತನ್ನು ಕುರಿತ ಹಲವು ಚರ್ಚೆಗಳಿಗೆ ವೇದಿಕೆಯಾಗಿರುವುದು 'ಪದಾರ್ಥ ಚಿಂತಾಮಣಿ' ಸಮುದಾಯ. ನಾವು ಬಳಸುವ ಶಬ್ದಗಳ ವ್ಯುತ್ಪತ್ತಿ, ಹೊಸ ಪದಗಳ ಅರ್ಥ, ಅನ್ಯಭಾಷೆಗಳ ಪದಗಳಿಗೆ ಕನ್ನಡದ ಪರ್ಯಾಯಗಳು - ಹೀಗೆ ಈ ಸಮುದಾಯದಲ್ಲಿ ಅನೇಕ ವಿಷಯಗಳ ಬಗ್ಗೆ ವಿಚಾರ ವಿನಿಮಯ ನಡೆಯುತ್ತದೆ. ವ್ಯಾಕರಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೂ ನಾವಿಲ್ಲಿ ಉತ್ತರ ಹುಡುಕಿಕೊಳ್ಳಬಹುದು. ಆನ್ಲೈನ್ ಮಾತ್ರವಲ್ಲದೆ ಆಫ್ಲೈನ್ ಜಗತ್ತಿನಲ್ಲೂ ಸಕ್ರಿಯವಾಗಿರುವ ಈ ಸಮುದಾಯ ಕಳೆದ ಕೆಲ ವರ್ಷಗಳಿಂದ 'ಪದಕಮ್ಮಟ' ಎಂಬ ವಾರ್ಷಿಕ ಸಮ್ಮೇಳನವನ್ನು ನಡೆಸಿಕೊಂಡು ಬಂದಿದೆ.
ಹೆಚ್ಚಿನ ವಿವರಗಳಿಗೆ: facebook.com/groups/padarthachintamani
ಯಾವುದೇ ವಿಷಯಕ್ಕೆ ಸಂಬಂಧಿಸಿದ ಜ್ಞಾನ ನಮ್ಮ ಭಾಷೆಯಲ್ಲೇ ದೊರಕುವಂತಿರಬೇಕು ಎನ್ನುವುದು ಆಗಿಂದಾಗ್ಗೆ ಕೇಳಸಿಗುವ ಆಶಯ. ಈ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಕನ್ನಡದಲ್ಲಿ ವಿಜ್ಞಾನ-ತಂತ್ರಜ್ಞಾನ ಮಾಹಿತಿ ಹೆಚ್ಚಿನ ಪ್ರಮಾಣದಲ್ಲಿ ಸಿಗುವಂತಾಗಬೇಕು ಎನ್ನುವ ಉದ್ದೇಶದಿಂದ 'ಕುತೂಹಲಿ' ಎಂಬ ಹೊಸ ಪ್ರಯತ್ನ ಶುರುವಾಗಿದೆ. ಕೇಂದ್ರ ಸರಕಾರದ ವಿಜ್ಞಾನ ಪ್ರಸಾರ್ ನೇತೃತ್ವದಲ್ಲಿ ಪ್ರಾರಂಭವಾಗಿರುವ ಈ ಸಮುದಾಯ ವಿಜ್ಞಾನ ಸಂವಹನದ ಸುತ್ತಮುತ್ತ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿದೆ. 'ಕುತೂಹಲಿ' ಎಂಬ ಸುದ್ದಿಪತ್ರದ ಪ್ರಕಟಣೆಯೂ ಇದರಲ್ಲಿ ಸೇರಿದೆ.
ಹೆಚ್ಚಿನ ವಿವರಗಳಿಗೆ: facebook.com/kutuhali