ಕೋವಿಡ್-೧೯ ಜಾಗತಿಕ ಸೋಂಕಿನ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ, ಅವುಗಳ ನಾಗರಿಕರಿಗೆ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ.
ಕೋವಿಡ್-೧೯ ಜಾಗತಿಕ ಸೋಂಕಿನ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ, ಅವುಗಳ ನಾಗರಿಕರಿಗೆ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ.

ವಿಶ್ವ ಆರೋಗ್ಯ ಸಂಸ್ಥೆ

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ವಿಶ್ವಸಂಸ್ಥೆಯ ಹೆಸರು ನಮ್ಮೆಲ್ಲರಿಗೂ ಗೊತ್ತು. ಅಂತಾರಾಷ್ಟ್ರೀಯ ಶಾಂತಿ-ಸುರಕ್ಷತೆಗಳನ್ನು ಕಾಪಾಡುವ, ರಾಷ್ಟ್ರಗಳ ನಡುವೆ ಸ್ನೇಹ ಸಂಬಂಧ ಸಾಧಿಸುವ, ಅಂತಾರಾಷ್ಟ್ರೀಯ ಸಹಕಾರವನ್ನು ಬೆಳೆಸುವ ಮತ್ತು ವಿವಿಧ ರಾಷ್ಟ್ರಗಳ ಚಟುವಟಿಕೆಗಳ ನಡುವೆ ಸಮನ್ವಯ ಸಾಧ್ಯವಾಗಿಸುವ ಉದ್ದೇಶದಿಂದ ಈ ಅಂತರ್‌ಸರಕಾರಿ ಸಂಸ್ಥೆಯನ್ನು ೧೯೪೫ರಲ್ಲಿ ಸ್ಥಾಪಿಸಲಾಯಿತು.

ಆರೋಗ್ಯ, ಪೋಷಣೆ ಮತ್ತು ನೈರ್ಮಲ್ಯ - ಇವು ವಿಶ್ವದ ಎಲ್ಲ ರಾಷ್ಟ್ರಗಳ ಪಾಲಿಗೂ ಮಹತ್ವದ ವಿಷಯವೇ. ಈ ವಿಷಯಗಳ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಲಸ ಮಾಡುವ ಉದ್ದೇಶದಿಂದ, ವಿಶ್ವ ಆರೋಗ್ಯ ಸಂಸ್ಥೆ (ವರ್ಲ್ಡ್ ಹೆಲ್ತ್ ಆರ್ಗನೈಸೇಶನ್) ೧೯೪೮ರಲ್ಲಿ ವಿಶ್ವಸಂಸ್ಥೆಯ ಅಂಗಸಂಸ್ಥೆಗಳಲ್ಲೊಂದಾಗಿ ಕಾರ್ಯಾರಂಭ ಮಾಡಿತು. ಈ ಸಂಸ್ಥೆ ಪ್ರಾರಂಭವಾದ ಏಪ್ರಿಲ್ ೭ನೇ ದಿನಾಂಕವನ್ನೇ ಇದೀಗ ವಿಶ್ವ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತದೆ.

ವಿಶ್ವ ಆರೋಗ್ಯ ಸಂಸ್ಥೆಯ ಕೇಂದ್ರಕಚೇರಿ ಇರುವುದು ಸ್ವಿಟ್ಸರ್ಲೆಂಡಿನ ಜಿನೀವಾದಲ್ಲಿ. ಇದಲ್ಲದೆ ವಿಶ್ವದಾದ್ಯಂತ ಈ ಸಂಸ್ಥೆಯ ೧೫೦ಕ್ಕೂ ಹೆಚ್ಚು ಕಚೇರಿಗಳಿವೆ. ವಿಶ್ವಸಂಸ್ಥೆ ಸದಸ್ಯರಾಷ್ಟ್ರಗಳ ಸರಕಾರಗಳಷ್ಟೇ ಅಲ್ಲದೆ ಹಲವು ಖಾಸಗಿ ಸಂಸ್ಥೆಗಳೂ ವಿಶ್ವ ಆರೋಗ್ಯ ಸಂಸ್ಥೆಯ ಕೆಲಸಗಳಲ್ಲಿ ಕೈಜೋಡಿಸುತ್ತವೆ. "ಎಲ್ಲೆಡೆ, ಎಲ್ಲರಿಗೂ ಉತ್ತಮ ಆರೋಗ್ಯವನ್ನು ಸಾಧಿಸುವ ಬದ್ಧತೆ" ನಮ್ಮನ್ನೆಲ್ಲ ಒಂದುಗೂಡಿಸುತ್ತದೆಂದು ವಿಶ್ವ ಆರೋಗ್ಯ ಸಂಸ್ಥೆ ತನ್ನ ಜಾಲತಾಣದಲ್ಲಿ ಹೇಳಿಕೊಂಡಿದೆ. ಸದಸ್ಯರಾಷ್ಟ್ರಗಳು ಹಾಗೂ ಖಾಸಗಿ ದಾನಿಗಳು ನೀಡುವ ದೇಣಿಗೆಯನ್ನು ಬಳಸಿ ವಿಶ್ವ ಆರೋಗ್ಯ ಸಂಸ್ಥೆ ತನ್ನ ಖರ್ಚುಗಳನ್ನು ನಿಭಾಯಿಸುತ್ತದೆ.

ಕೋವಿಡ್-೧೯ ಜಾಗತಿಕ ಸೋಂಕಿನ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ತನ್ನ ಸದಸ್ಯ ರಾಷ್ಟ್ರಗಳಿಗೆ, ಅವುಗಳ ನಾಗರಿಕರಿಗೆ ಅಗತ್ಯ ಮಾರ್ಗದರ್ಶನ ನೀಡುವ ಕೆಲಸ ಮಾಡುತ್ತಿದೆ. ಈ ಪರಿಸ್ಥಿತಿಯನ್ನು ಸರಿಯಾಗಿ ನಿಭಾಯಿಸಿಲ್ಲವೆಂಬ ಆರೋಪವೂ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ಕೇಳಿಬಂದಿದೆ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com