ರೋಗ ಹರಡುವ ವಿಷಯಕ್ಕೆ ಬಂದಾಗ ಸೋಂಕಿನ ಸರಪಳಿಯನ್ನು ತುಂಡರಿಸುವುದು ಬಹಳ ಒಳ್ಳೆಯ ಕೆಲಸ!
ರೋಗ ಹರಡುವ ವಿಷಯಕ್ಕೆ ಬಂದಾಗ ಸೋಂಕಿನ ಸರಪಳಿಯನ್ನು ತುಂಡರಿಸುವುದು ಬಹಳ ಒಳ್ಳೆಯ ಕೆಲಸ!

ಸರಪಳಿಯನ್ನು ಏಕೆ ಮುರಿಯಬೇಕು?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಒಬ್ಬರು ಇನ್ನೊಬ್ಬರಿಗೆ ಪುಸ್ತಕ ಉಡುಗೊರೆ ನೀಡಲು ಹೇಳುವ ಸೋಶಿಯಲ್ ಮೀಡಿಯಾ ಚಟುವಟಿಕೆಯನ್ನು ನೀವು ಗಮನಿಸಿರಬಹುದು. ಅಲ್ಲಿ ಹೇಳಿದ ನಿಯಮಗಳನ್ನೆಲ್ಲ ಎಲ್ಲರೂ ಪಾಲಿಸಿದರೆ ಒಬ್ಬೊಬ್ಬರಿಗೆ ಇಂತಿಷ್ಟು ಪುಸ್ತಕ ಬರುತ್ತದೆಂದು ಅದು ಹೇಳುತ್ತದೆ. ನಡುವೆ ಯಾರೋ ಒಬ್ಬರು ಪುಸ್ತಕ ಕಳಿಸದಿದ್ದರೂ ನಮಗೆ ಸಿಗುವ ಪುಸ್ತಕಗಳ ಸಂಖ್ಯೆ ಕಡಿಮೆಯಾಗಿಬಿಡುತ್ತದೆ. ಸಂಬಂಧವೇ ಇಲ್ಲವೆನಿಸುವ ಈ ಉದಾಹರಣೆಯನ್ನು ರೋಗ ಹರಡುವ ವಿಧಾನಕ್ಕೂ ಅನ್ವಯಿಸಬಹುದು.

ಯಾವುದೋ ರೋಗದಿಂದ ಬಾಧಿತನಾದ ಒಬ್ಬ ವ್ಯಕ್ತಿ ಅದನ್ನು ಇನ್ನಿಬ್ಬರಿಗೆ ಹರಡಬಲ್ಲ ಎಂದುಕೊಳ್ಳಿ. ಆ ಇಬ್ಬರಿಂದ ಇನ್ನೂ ನಾಲ್ಕು ಜನಕ್ಕೆ, ಆ ನಾಲ್ವರಿಂದ ಎಂಟು ಜನಕ್ಕೆ, ಅವರಿಂದ ಹದಿನಾರು ಜನಕ್ಕೆ, ಅವರಿಂದ ಮೂವತ್ತೆರಡು ಮಂದಿಗೆ ಆ ರೋಗ ಹರಡಬಲ್ಲದು. ಇದು ಗಣಿತದ ಗುಣೋತ್ತರ ಶ್ರೇಢಿಯನ್ನು (geometric progression) ಅನುಸರಿಸುತ್ತದೆ. ಪ್ರತಿ ಹಂತದಲ್ಲೂ ರೋಗಪೀಡಿತರ ಸಂಖ್ಯೆ ದ್ವಿಗುಣವಾಗುವ ಸಾಧ್ಯತೆ ಇರುವುದರಿಂದ ಆ ರೋಗ ಬಹಳ ಕ್ಷಿಪ್ರವಾಗಿ ಇಡೀ ಸಮುದಾಯಕ್ಕೆ ಹರಡಿಬಿಡಬಲ್ಲದು.

ಪುಸ್ತಕ ಕಳಿಸುವ ಉದಾಹರಣೆಯಲ್ಲಿ ಸರಪಳಿಯನ್ನು ಮುಂದುವರೆಸದಿರುವುದು ತಪ್ಪಿರಬಹುದು. ಆದರೆ ರೋಗ ಹರಡುವ ವಿಷಯಕ್ಕೆ ಬಂದಾಗ ಸೋಂಕಿನ ಸರಪಳಿಯನ್ನು ತುಂಡರಿಸುವುದು ಬಹಳ ಒಳ್ಳೆಯ ಕೆಲಸ. 'ಸರಪಳಿ ಮುರಿಯುವುದು' (break the chain) ಎಂದು ಕರೆಯುವುದು ಇದನ್ನೇ.

'ಸರಪಳಿ ಮುರಿಯುವುದು' ಹೀಗೆ!
'ಸರಪಳಿ ಮುರಿಯುವುದು' ಹೀಗೆ!ILLUSTRATION BY TOBY MORRIS / thespinoff.co.nz

ಇದರಲ್ಲಿ ನಿರ್ಣಾಯಕ ಚಿಕಿತ್ಸೆ, ಲಸಿಕೆ ಮತ್ತು ಹರಡುವುದನ್ನು ತಡೆಗಟ್ಟುವುದೆಂಬ ಮೂರು ಮುಖ್ಯ ವಿಧಾನಗಳಿವೆ. ಈ ಪೈಕಿ ಯಾವುದೇ ವಿಧಾನ ಬಳಸಿ ಯಾವುದೇ ಹಂತದಲ್ಲಿ ರೋಗ ಹರಡುವುದನ್ನು ತಡೆದರೂ ಅದು ಮುಂದೆ ಆಗಬಹುದಾದ ಬಹುದೊಡ್ಡ ಹಾನಿಯನ್ನು ತಪ್ಪಿಸಬಲ್ಲದು. ಈ ಸರಪಳಿಯನ್ನು ಪ್ರಾರಂಭಿಕ ಹಂತದಲ್ಲೇ ಮುರಿದರಂತೂ ರೋಗ ಹರಡುವ ವೇಗವನ್ನು ಗಣನೀಯವಾಗಿ ತಗ್ಗಿಸಬಹುದು.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com