ಹೆಸರು ಏನೇ ಇದ್ದರೂ ರೋಗದ ಮೂಲವನ್ನು ಗುರುತಿಸುವುದು ಸಾಧ್ಯವಾದರೆ ಅದು ರೋಗವನ್ನು ಇನ್ನಷ್ಟು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ .
ಹೆಸರು ಏನೇ ಇದ್ದರೂ ರೋಗದ ಮೂಲವನ್ನು ಗುರುತಿಸುವುದು ಸಾಧ್ಯವಾದರೆ ಅದು ರೋಗವನ್ನು ಇನ್ನಷ್ಟು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ .

ಯಾರಿದು ಪೇಶೆಂಟ್ ಜ಼ೀರೋ?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಯಾವುದೇ ರೋಗ ಎಷ್ಟು ವ್ಯಾಪಕವಾಗಿ ಹರಡಿದೆಯೆನ್ನುವುದರ ಬಗ್ಗೆ ಸರಕಾರಗಳು ಸತತ ನಿಗಾ ವಹಿಸಿದ ಹಾಗೆ, ಮೊತ್ತಮೊದಲಿಗೆ ಆ ರೋಗದ ಸೋಂಕು ಎಲ್ಲಿ ಯಾರಿಗೆ ತಗುಲಿತು ಎನ್ನುವುದನ್ನು ತಿಳಿಯಲು ವೈದ್ಯವಿಜ್ಞಾನಿಗಳು ಉತ್ಸುಕರಾಗಿರುತ್ತಾರೆ. ಆ ವಿಷಯ ತಿಳಿದರೆ ರೋಗದ ಮೂಲದ ಬಗ್ಗೆ ಮಹತ್ವದ ವಿವರಗಳು ಗೊತ್ತಾಗುತ್ತವೆ, ಹಾಗೂ ಆ ರೋಗ ಇನ್ನಷ್ಟು ಹರಡದಂತೆ ತಡೆಯಲು ಆ ಮಾಹಿತಿಯನ್ನು ಬಳಸಿಕೊಳ್ಳಬಹುದು ಎನ್ನುವುದು ಈ ಉತ್ಸುಕತೆಯ ಹಿಂದಿನ ಆಲೋಚನೆ.

ಹೀಗೆ, ಯಾವುದೇ ರೋಗದಿಂದ ಮೊತ್ತಮೊದಲು ಸೋಂಕಿತನಾದ ವ್ಯಕ್ತಿಯನ್ನು 'ಪೇಶೆಂಟ್ ಜ಼ೀರೋ' ಎಂದು ಗುರುತಿಸಲಾಗುತ್ತದೆ. ಹೀಗೆ ನಿರ್ದಿಷ್ಟ ವ್ಯಕ್ತಿಯೊಬ್ಬನನ್ನು ಗುರುತಿಸುವುದು ಆತನ ಬಗೆಗಿನ ಜನಾಕ್ರೋಶಕ್ಕೆ ಕಾರಣವಾಗುವ ಅಪಾಯವಿರುವುದರಿಂದ ಈ ಹೆಸರಿನ ಬದಲು 'ಇಂಡೆಕ್ಸ್ ಕೇಸ್' ಎಂಬ ಉಲ್ಲೇಖವನ್ನು (ನಿರ್ದಿಷ್ಟ ರೋಗದ ಮೊದಲ ದಾಖಲಿತ ಪ್ರಕರಣ ಎಂಬ ಅರ್ಥದಲ್ಲಿ) ಬಳಸುವ ಅಭ್ಯಾಸವೂ ಇದೆ. ಯಾವುದೇ ರೋಗ ಮೊದಲಿಗೆ ಬಾಧಿಸಿದ್ದು ಇಂತಹವರನ್ನೇ ಎಂದು ನಿಖರವಾಗಿ ಗುರುತಿಸುವುದು ಕಷ್ಟದ ಕೆಲಸವಾದ್ದರಿಂದ ಮೊದಲ ದಾಖಲಿತ ಪ್ರಕರಣ ಎನ್ನುವುದೇ ಹೆಚ್ಚು ಸೂಕ್ತವೆಂದು ತಜ್ಞರೂ ಅಭಿಪ್ರಾಯಪಡುತ್ತಾರೆ.

ಹೆಸರು ಏನೇ ಇದ್ದರೂ ರೋಗದ ಮೂಲವನ್ನು ಗುರುತಿಸುವುದು ಸಾಧ್ಯವಾದರೆ ಅದು ರೋಗವನ್ನು ಇನ್ನಷ್ಟು ಹರಡದಂತೆ ತಡೆಯಲು ಸಹಾಯ ಮಾಡುತ್ತದೆ ಎನ್ನುವುದಂತೂ ನಿಜ. ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಕೋವಿಡ್-೧೯ರಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ, ರೋಗಿಗಳ ಸಂಪರ್ಕಕ್ಕೆ ಬಂದವರನ್ನು ಗುರುತಿಸುವ 'ಕಾಂಟ್ಯಾಕ್ಟ್ ಟ್ರೇಸಿಂಗ್' ಪ್ರಕ್ರಿಯೆಯು ರೋಗದ ಮೂಲವನ್ನು ತಿಳಿಯಲು ನೆರವಾಗಬಲ್ಲದು. ಜಾಗತಿಕ ಸೋಂಕಿನ (ಪ್ಯಾನ್‌ಡೆಮಿಕ್) ಸಂದರ್ಭದಲ್ಲಿ ನಿರ್ದಿಷ್ಟ ಪ್ರದೇಶ ಅಥವಾ ದೇಶದ ಮೊದಲ ರೋಗಿ ಯಾರು ಎಂದು ತಿಳಿದುಕೊಳ್ಳುವುದೂ ರೋಗದ ನಿಯಂತ್ರಣದಲ್ಲಿ ಸಹಕಾರಿಯಾಗುವುದು ಸಾಧ್ಯ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com