ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ, ಅವು ಇನ್ನಷ್ಟು ಹರಡದಂತೆ ತಡೆಯುವುದೂ ಅಷ್ಟೇ ಮುಖ್ಯ!
ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ, ಅವು ಇನ್ನಷ್ಟು ಹರಡದಂತೆ ತಡೆಯುವುದೂ ಅಷ್ಟೇ ಮುಖ್ಯ!

ಕ್ವಾರಂಟೈನ್: ಏನು? ಏಕೆ?

ವಿಜಯ ಕರ್ನಾಟಕ 'ಕೊರೊನಾಲಜಿ' ಅಂಕಣದಲ್ಲಿ ಪ್ರಕಟವಾದ ಬರಹ

ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಸಂದರ್ಭದಲ್ಲಿ ಅವುಗಳಿಗೆ ಚಿಕಿತ್ಸೆ ನೀಡುವುದು ಎಷ್ಟು ಮುಖ್ಯವೋ, ಅವು ಇನ್ನಷ್ಟು ಹರಡದಂತೆ ತಡೆಯುವುದೂ ಅಷ್ಟೇ ಮುಖ್ಯ. ಇಲ್ಲಿ 'ಐಸೋಲೇಶನ್' ಹಾಗೂ 'ಕ್ವಾರಂಟೈನ್' ಎಂಬ ಎರಡು ಕ್ರಿಯೆಗಳು ಪ್ರಮುಖ ಪಾತ್ರ ವಹಿಸುತ್ತವೆ.

ಯಾರಿಗಾದರೂ ಈಗಾಗಲೇ ರೋಗ ತಗುಲಿದ್ದರೆ, ಅವರಿಂದ ಆ ರೋಗ ಇನ್ನಷ್ಟು ಹರಡುವುದನ್ನು ತಪ್ಪಿಸಲು ಅವರು ಇತರರ ಸಂಪರ್ಕಕ್ಕೆ ಬಾರದಂತೆ ನೋಡಿಕೊಳ್ಳಬೇಕಾಗುತ್ತದೆ. ರೋಗಿಗಳನ್ನು ಆರೋಗ್ಯವಂತರಿಂದ ಬೇರ್ಪಡಿಸುವ ಈ ಕ್ರಿಯೆಯೇ ಐಸೋಲೇಶನ್ (ಬೇರ್ಪಡಿಕೆ). ಐಸೋಲೇಶನ್‌ನಲ್ಲಿರುವ ರೋಗಿಗಳು - ಮನೆಯಲ್ಲಿದ್ದರೂ ಆಸ್ಪತ್ರೆಯಲ್ಲಿದ್ದರೂ - ಪ್ರತ್ಯೇಕ ಕೋಣೆಯಲ್ಲಿರುವುದು, ಲೋಟ-ತಟ್ಟೆ-ಟವಲ್ ಮುಂತಾದ ಯಾವುದೇ ವಸ್ತುವನ್ನು ಬೇರೆಯವರ ಜೊತೆ ಹಂಚಿಕೊಳ್ಳದಿರುವುದು ಅಪೇಕ್ಷಣೀಯ. ರೋಗ ಸಂಪೂರ್ಣ ವಾಸಿಯಾಗುವವರೆಗೂ ಇದು ಮುಂದುವರೆಯಬೇಕಾಗುತ್ತದೆ.

ರೋಗಕಾರಕ ಅಥವಾ ರೋಗಿಗಳ ಸಂಪರ್ಕಕ್ಕೆ ಬಂದಿರುವ ಸಾಧ್ಯತೆಯುಳ್ಳವರು ಕೂಡ, ಸದ್ಯ ಆರೋಗ್ಯವಾಗಿಯೇ ಇದ್ದರೂ, ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ರೋಗಲಕ್ಷಣಗಳು ಕಾಣಿಸಿಕೊಳ್ಳಲು ಬೇಕಾದಷ್ಟು ಸಮಯ (ಉದಾ: ೧೪ ದಿನ) ಒಂದೇ ಕಡೆ ಉಳಿದುಕೊಳ್ಳುವ, ಇತರರ ಸಂಪರ್ಕದಿಂದ ದೂರವಿರುವ ಇಂಥದ್ದೊಂದು ಕ್ರಮವೇ 'ಕ್ವಾರಂಟೈನ್' (ಸಂಪರ್ಕತಡೆ). ನಿಗದಿತ ಅವಧಿ ಮುಕ್ತಾಯವಾದ ನಂತರ ಪರೀಕ್ಷೆಗೆ ಒಳಪಟ್ಟು, ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡಿಲ್ಲವೆಂದರೆ ಮಾತ್ರ ಕ್ವಾರಂಟೈನ್‌ನಿಂದ ಹೊರಬರಬಹುದು.

ಅಂದಹಾಗೆ ಐಸೋಲೇಶನ್ ಅಥವಾ ಕ್ವಾರಂಟೈನ್‌ಗೆ ಒಳಪಡುವಂತೆ ಬೇರೆ ಯಾರಾದರೂ ಹೇಳುವುದನ್ನೇ ಕಾಯಬೇಕು ಎಂದೇನೂ ಇಲ್ಲ. ಸಾಂಕ್ರಾಮಿಕ ರೋಗಗಳು ಹರಡುತ್ತಿರುವ ಪ್ರದೇಶಗಳಲ್ಲಿ ಸಂಚರಿಸಿದವರು ಅಥವಾ ರೋಗ ದೃಢಪಟ್ಟಿರುವವರ ಸಂಪರ್ಕಕ್ಕೆ ಬಂದವರು ಸೆಲ್ಫ್-ಕ್ವಾರಂಟೈನ್ (ಸ್ವಯಂ ಸಂಪರ್ಕತಡೆ) ವಿಧಿಸಿಕೊಳ್ಳುವುದು ಒಳ್ಳೆಯದು. ಹಾಗೆಯೇ ಯಾವುದೇ ರೋಗಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣವೇ ಸೆಲ್ಫ್-ಐಸೋಲೇಶನ್‌ (ಸ್ವಯಂ ಬೇರ್ಪಡಿಕೆ) ವಿಧಿಸಿಕೊಳ್ಳುವುದು ಉತ್ತಮ.

ಸೌಜನ್ಯ: ವಿಜಯ ಕರ್ನಾಟಕ

Related Stories

No stories found.
logo
ಇಜ್ಞಾನ Ejnana
www.ejnana.com