ತಮ್ಮ ಸಂಶೋಧನೆಗಳಿಂದ ಇಡೀ ಪ್ರಪಂಚಕ್ಕೆ ಮರೆಯಲಾಗದ ಕೊಡುಗೆ ಕೊಟ್ಟ ಸಾಧಕರನ್ನು ಪರಿಚಯ ಮಾಡಿಕೊಳ್ಳಲು ಇದು ಓದಲೇಬೇಕಾದ ಕೃತಿ
ತಮ್ಮ ಸಂಶೋಧನೆಗಳಿಂದ ಇಡೀ ಪ್ರಪಂಚಕ್ಕೆ ಮರೆಯಲಾಗದ ಕೊಡುಗೆ ಕೊಟ್ಟ ಸಾಧಕರನ್ನು ಪರಿಚಯ ಮಾಡಿಕೊಳ್ಳಲು ಇದು ಓದಲೇಬೇಕಾದ ಕೃತಿ ejnana.com
ವೈವಿಧ್ಯ

ಪುಸ್ತಕ ಪರಿಚಯ: ವಿಶ್ವವಿಖ್ಯಾತ ವೈದ್ಯವಿಜ್ಞಾನಿಗಳು ಮತ್ತು ಅವರ ಸಂಶೋಧನೆಗಳು

ಇಜ್ಞಾನ ತಂಡ

ಕೋವಿಡ್-೧೯ ಭೀತಿಯ ಹಿನ್ನೆಲೆಯಲ್ಲಿ ಇದೀಗ ಜಗತ್ತಿನ ಗಮನವೆಲ್ಲ ವೈದ್ಯವಿಜ್ಞಾನ ಕ್ಷೇತ್ರದ ಕಡೆಗೆ ಕೇಂದ್ರೀಕೃತವಾಗಿದೆ. ಈ ರೋಗ ಉಂಟುಮಾಡುವ ವೈರಸ್ ಹರಡುವುದನ್ನು ತಡೆಯಲು ವೈದ್ಯವಿಜ್ಞಾನಿಗಳು ಯಾವ ಕ್ರಮ ತೆಗೆದುಕೊಳ್ಳಬಹುದು, ಅದಕ್ಕೆ ಲಸಿಕೆಯನ್ನು ಯಾವಾಗ ಕಂಡುಹಿಡಿಯಬಹುದು ಎನ್ನುವ ಪ್ರಶ್ನೆಗಳು ಎಲ್ಲರನ್ನೂ ಕಾಡುತ್ತಿವೆ.

ವೈದ್ಯವಿಜ್ಞಾನ ಕ್ಷೇತ್ರ ಇಂತಹ ಸನ್ನಿವೇಶವನ್ನು ಎದುರಿಸುತ್ತಿರುವುದು ಇದೇ ಮೊದಲ ಬಾರಿಯೇನೂ ಅಲ್ಲ. ಈ ಹಿಂದೆಯೂ ಹಲವು ಮಾರಕ ರೋಗಗಳು ಕಾಡಿದಾಗ ಹಲವಾರು ವೈದ್ಯವಿಜ್ಞಾನಿಗಳು ತಮ್ಮ ಸಂಶೋಧನೆಗಳ ಮೂಲಕ ಅವುಗಳಿಗೆ ಪರಿಹಾರ ಹುಡುಕಿಕೊಟ್ಟಿದ್ದಾರೆ. ವಿಶ್ವವಿಖ್ಯಾತರಾಗಿರುವ ಇಂತಹ ನಲವತ್ತೊಂದು ವೈದ್ಯವಿಜ್ಞಾನಿಗಳು ಮತ್ತು ಅವರ ಸಂಶೋಧನೆಗಳನ್ನು ಪರಿಚಯಿಸುವ ಕೃತಿಯನ್ನು ನವಕರ್ನಾಟಕ ಪ್ರಕಾಶನ ಪ್ರಕಟಿಸಿದೆ.

'ವಿಶ್ವವಿಖ್ಯಾತ ವೈದ್ಯವಿಜ್ಞಾನಿಗಳು ಮತ್ತು ಅವರ ಸಂಶೋಧನೆಗಳು' ಎಂಬ ಹೆಸರಿನ ಈ ಕೃತಿಯಲ್ಲಿ ಸುಶ್ರುತ, ಚರಕ, ಹಿಪ್ಪೋಕ್ರೇಟಿಸ್ ಮುಂತಾದವರಿಂದ ಪ್ರಾರಂಭವಾಗಿ ಈಚಿನ ವೈದ್ಯವಿಜ್ಞಾನಿಗಳವರೆಗೆ ಹಲವು ಪರಿಚಿತ-ಅಪರಿಚಿತ ಸಾಧಕರ ಪರಿಚಯವನ್ನು ನಾವು ಓದಬಹುದು. ಮಾರಣಾಂತಿಕ 'ಕಾಲಾ ಅಜ಼ಾರ್'ಗೆ ಮದ್ದು ಕಂಡುಹಿಡಿದ ಉಪೇಂದ್ರನಾಥ ಬ್ರಹ್ಮಚಾರಿ ಹಾಗೂ ಹಲವು ಔಷಧಗಳ ಸಂಶೋಧಕ ಯಲ್ಲಾಪ್ರಗಡ ಸುಬ್ಬರಾಯರ ಪರಿಚಯ ಓದಿದಾಗಂತೂ ಭಾರತೀಯ ಸಾಧಕರ ಬಗ್ಗೆ ಹೆಮ್ಮೆಯೆನಿಸುತ್ತದೆ. ಅಂತಹ ಸಾಧಕರ ಪರಿಚಯ ನಮ್ಮಲ್ಲಿ ಅನೇಕರಿಗೆ ಇಲ್ಲದಿರುವ ಪರಿಸ್ಥಿತಿ ಬೇಸರವನ್ನೂ ಮೂಡಿಸುತ್ತದೆ.

ತಮ್ಮ ಸಂಶೋಧನೆಗಳಿಂದ ಇಡೀ ಪ್ರಪಂಚಕ್ಕೆ ಮರೆಯಲಾಗದ ಕೊಡುಗೆ ಕೊಟ್ಟ ಸಾಧಕರನ್ನು ಪರಿಚಯ ಮಾಡಿಕೊಳ್ಳಲು ಇದು ಓದಲೇಬೇಕಾದ ಕೃತಿ. ಈ ಮಾಹಿತಿಪೂರ್ಣ ಕೃತಿಯ ಲೇಖಕರು ಡಾ. ಎಚ್. ಡಿ. ಚಂದ್ರಪ್ಪಗೌಡ ಹಾಗೂ ಡಾ. ನಾ. ಸೋಮೇಶ್ವರ.

ವಿಶ್ವವಿಖ್ಯಾತ ವೈದ್ಯವಿಜ್ಞಾನಿಗಳು ಮತ್ತು ಅವರ ಸಂಶೋಧನೆಗಳು

ಲೇಖಕರು: ಡಾ. ಎಚ್. ಡಿ. ಚಂದ್ರಪ್ಪಗೌಡ ಹಾಗೂ ಡಾ. ನಾ. ಸೋಮೇಶ್ವರ

ಪ್ರಕಾಶಕರು: ನವಕರ್ನಾಟಕ ಪ್ರಕಾಶನ

೧೫೨ ಪುಟಗಳು, ಬೆಲೆ: ರೂ. ೧೪೦

ಪುಸ್ತಕ ಕೊಳ್ಳಲು: navakarnatakaonline.com