ಈ ಸಾಕ್ಷ್ಯಚಿತ್ರವನ್ನು ಡಿವಿಜಿ ಬಳಗ ಪ್ರತಿಷ್ಠಾನದ ಸಹಯೋಗದಲ್ಲಿ ಕಲಾಮಾಧ್ಯಮ ಮೀಡಿಯಾ ವರ್ಕ್ಸ್ ಸಿದ್ಧಪಡಿಸಿದೆ
ಈ ಸಾಕ್ಷ್ಯಚಿತ್ರವನ್ನು ಡಿವಿಜಿ ಬಳಗ ಪ್ರತಿಷ್ಠಾನದ ಸಹಯೋಗದಲ್ಲಿ ಕಲಾಮಾಧ್ಯಮ ಮೀಡಿಯಾ ವರ್ಕ್ಸ್ ಸಿದ್ಧಪಡಿಸಿದೆ ಸ್ವಾಮಿಯಾನ
ವೈವಿಧ್ಯ

'ಸ್ವಾಮಿಯಾನ' ನೋಡಿದ್ದೀರಾ?

ಇಜ್ಞಾನ ತಂಡ

ಡಾ. ಬಿ. ಜಿ. ಎಲ್. ಸ್ವಾಮಿಯವರ (೧೯೧೮-೮೧) ಕಾರ್ಯಕ್ಷೇತ್ರ ಸಸ್ಯವಿಜ್ಞಾನವಾದರೂ ಕಲೆ, ಸಾಹಿತ್ಯ, ಇತಿಹಾಸಗಳಲ್ಲೂ ಅವರಿಗೆ ಅಗಾಧ ಪಾಂಡಿತ್ಯವಿತ್ತು; ಹಲವು ಭಾಷೆಗಳ ಆಳವಾದ ಪರಿಚಯ ಇತ್ತು. ಇಂಗ್ಲಿಷಿನಲ್ಲಿ ವೈಜ್ಞಾನಿಕ ಬರಹ - ಸಂಶೋಧನಾ ಪ್ರಬಂಧಗಳನ್ನು ಬರೆದದ್ದಷ್ಟೇ ಅಲ್ಲ, ಕನ್ನಡದಲ್ಲೂ ಅವರು ಸಾಹಿತ್ಯ ಕೃಷಿ ಮಾಡಿದ್ದರು. ಹಸುರು ಹೊನ್ನು, ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕ, ಸಾಕ್ಷಾತ್ಕಾರದ ದಾರಿಯಲ್ಲಿ ಮುಂತಾದ ಕೃತಿಗಳು ಕನ್ನಡ ವಿಜ್ಞಾನ ಸಾಹಿತ್ಯ ಕ್ಷೇತ್ರಕ್ಕೆ ಅವರ ಮಹತ್ವದ ಕೊಡುಗೆಗಳು.

ವಿಜ್ಞಾನ ಸಂವಹನದಲ್ಲಿ ಹಾಸ್ಯವನ್ನೂ ಒಂದು ಮಾಧ್ಯಮವಾಗಿ ಬಳಸಿಕೊಂಡ ಸ್ವಾಮಿ ತಮ್ಮ ವೃತ್ತಿಜೀವನದ ಕಹಿನೆನಪುಗಳನ್ನೂ ಹಾಸ್ಯಮಯವಾಗಿ ವರ್ಣಿಸಿದರು; ಕಾಲೇಜು ರಂಗ, ಕಾಲೇಜು ತರಂಗ, ಪ್ರಾಧ್ಯಾಪಕನ ಪೀಠದಲ್ಲಿ ಮುಂತಾದ ಕೃತಿಗಳ ಮೂಲಕ ಓದುಗರಲ್ಲಿ ನಗೆಯುಕ್ಕಿಸಿದರು. ರಾಜ್ಯ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳಿಗೆ ಪಾತ್ರರಾಗಿದ್ದ ಸ್ವಾಮಿಯವರು ಹಲವು ಕೆಲಸಗಳನ್ನು ಅಪೂರ್ಣವಾಗಿ ಬಿಟ್ಟು ಅಕಾಲಿಕವಾಗಿ ನಿಧನರಾದದ್ದು ಎಂದೆಂದೂ ತುಂಬಲಾಗದ ನಷ್ಟ.

ಇಂತಹ ಅನನ್ಯ ಸಾಧಕರಾಗಿದ್ದ ಸ್ವಾಮಿಯವರ ಜೀವನ-ಸಾಧನೆಗಳ ಕುರಿತ ಸಾಕ್ಷ್ಯಚಿತ್ರವನ್ನು ಮಂಗಳೂರಿನ ಡಿವಿಜಿ ಬಳಗ ಪ್ರತಿಷ್ಠಾನದ ಸಹಯೋಗದಲ್ಲಿ ಬೆಂಗಳೂರಿನ ಕಲಾಮಾಧ್ಯಮ ಮೀಡಿಯಾ ವರ್ಕ್ಸ್ ಸಿದ್ಧಪಡಿಸಿದೆ. ಬೆಂಗಳೂರಿನ ಸಮಾಜ ಸೇವಕರ ಸಮಿತಿ ಈ ಕಾರ್ಯಕ್ಕೆ ಬೆಂಬಲ ನೀಡಿದೆ. ಈ ಸಾಕ್ಷ್ಯಚಿತ್ರವನ್ನು ಚಿತ್ರಿಸಿದವರು ಕಲಾಮಾಧ್ಯಮದ ಶ್ರೀ ಕೆ. ಎಸ್. ಪರಮೇಶ್ವರ ಮತ್ತವರ ತಂಡ.

ನೋಡಿ, ನಿಮ್ಮ ಆಪ್ತರಿಗೂ ತಿಳಿಸಿ, ಈ ಪ್ರಯತ್ನವನ್ನು ಬೆಂಬಲಿಸಿ!